ಸೊರಬ: ಪಟ್ಟಣದ ಶ್ರೀ ಬಯಲು ಬಸವೇಶ್ವರ ಸ್ವಾಮಿಯ ಮಹಾರಥೋತ್ಸವ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ಬೆಳಗ್ಗೆ ಬತ್ತಿಕೊಪ್ಪದ ಪುರವಂತರಾದ ಮಹೇಶ್ವರ ಗೌಡ, ಹನುಮಂತ ಗೌಡ ಸಂಗಡಿಗರಿಂದ ಶ್ರೀ ವೀರಭದ್ರ ಸ್ವಾಮಿಯ ಶರಭಿ ಗುಗ್ಗುಳ, ಮಲ್ಲಿಕಾರ್ಜುನ ಶಾಸ್ತ್ರಿ ಅರಮನೆಮಠ ಪೌರೋಹಿತ್ಯದಲ್ಲಿ ಶ್ರೀ ಬಸವೇಶ್ವರ ಸ್ವಾಮಿಯ ಮಹಾರಥೋತ್ಸವ ನಡೆಯಿತು. ರಥೋತ್ಸವದ ಬಳಿಕ ತೀರ್ಥ ಪ್ರಸಾದ ವಿನಿಯೋಗ ಮತ್ತು ಅನ್ನಸಂತರ್ಪಣೆ ನಡೆಸಲಾಯಿತು.
ಶ್ರೀ ಬಯಲು ಬಸವೇಶ್ವರ ಸ್ವಾಮಿಯು ಪಟ್ಟಣ ಸೇರಿದಂತೆ ಕೊಡಕಣಿ, ಹಿರೇಶಕನ, ಚಿಕ್ಕಶಕನ ಸುತ್ತಮುತ್ತಲಿನ ಗ್ರಾಮಸ್ಥರ ಮನೆದೇವರಾಗಿದೆ. ರಥೋತ್ಸವದ ನಿಮಿತ್ತ ಫೆ.19ರಿಂದಲೇ ಕಂಕಣ ಧಾರಣೆ, ಪ್ರತಿದಿನ ಉತ್ಸವ ಪೂಜೆ, ಮಂಗಳಾರತಿ, ಫೆ.23ರಂದು ಶ್ರೀ ಘನಭಸವ ಅಮರೇಶ್ವರ ಸ್ವಾಮೀಜಿ ಅವರ ಸಮ್ಮುಖದಲ್ಲಿ ಚೌಡೇಶ್ವರಿ ದೇವಸ್ಥಾನದ ವಾರ್ಷಿಕೋತ್ಸವ, ಬಸವೇಶ್ವರ ದೇವರಿಗೆ ರುದ್ರಾಭಿಷೇಕ ಹಾಗೂ ಪುಷ್ಪಕ ರಥೋತ್ಸವ ಜರಗಿತ್ತು.