More

    ಲಿಂಗಾಯತರ ಮತಗಳು ಮಾರಾಟಕ್ಕಿಲ್ಲ: ಜ್ಞಾನಪೀಠದ ಪೀಠಾಧ್ಯಕ್ಷ ಡಾ.ಚನ್ನಬಸವಾನಂದಸ್ವಾಮೀಜಿ ಹೇಳಿಕೆ

    ಮಂಡ್ಯ: ರಾಜ್ಯದಲ್ಲಿ ಹೆಚ್ಚಿನಸಂಖ್ಯೆಯಲ್ಲಿರುವ ಲಿಂಗಾಯತರು ಯಾವುದೇ ಪಕ್ಷದ ಅಡಿಯಾಳುಗಳಲ್ಲ. ಅಂತೆಯೇ ಸಮುದಾಯದ ಮತಗಳು ಮಾರಾಟಕ್ಕಿಲ್ಲ ಎಂದು ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಡಾ.ಚನ್ನಬಸವಾನಂದ ಸ್ವಾಮೀಜಿ ಹೇಳಿದರು.
    ನಗರದ ಹಿಂದಿಭವನದಲ್ಲಿ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಣೆ, ಲಿಂಗಾಯತ ಮಹಾಸಭಾ ಟ್ರಸ್ಟ್ ಉದ್ಘಾಟನೆ ಹಾಗೂ ನೂರು ಜನ ಸಾಧಕರಿಗೆ ‘ಬಸವಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗಬೇಕೆಂಬ ಹೋರಾಟ ಇನ್ನೂ ಜೀವಂತವಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ಬಗ್ಗೆ ಯಾವುದೇ ನಿರ್ಣಯ ಕೈಗೊಳ್ಳದಿರುವುದು ವಿಷಾದನೀಯ. ಲಿಂಗಾಯತರಲ್ಲಿ ರಾಜಕೀಯ ಪ್ರಜ್ಞೆ ಜಾಗೃತವಾಗಬೇಕು ಎಂದು ಸಲಹೆ ನೀಡಿದರು.
    ಬಸವಾದಿ ಶರಣರ ಪರಂಪರೆಯಲ್ಲಿ ಲಿಂಗಾಯತ, ವೀರಶೈವ ಎಂಬುದು ಬೇರೆ ಬೇರೆಯಲ್ಲ. ಲಿಂಗವನ್ನು ಆಯತ ಮಾಡಿಕೊಂಡು ಪೂಜಿಸುವವರೆಲ್ಲರೂ ಲಿಂಗಾಯತರೇ. ಬಣಜಿಗ ಲಿಂಗಾಯಿತ, ಶೆಟ್ಟಿ ಲಿಂಗಾಯಿತ, ಪಂಚಮಶಾಲಿ ಮುಂತಾಗಿ ಏನೆಲ್ಲ ಹೆಸರಿನಿಂದ ಕರೆದರೂ ಒಟ್ಟಾರೆ ನಾವು ಲಿಂಗಾಯತರು ಎಂಬುದನ್ನು ಅರಿಯಬೇಕು. ಮುನ್ನೂರು ವರ್ಷ ನಮ್ಮನ್ನಾಳಿದ ಬ್ರಿಟಿಷರು ತಮ್ಮ ಪಾರ್ಲಿಮೆಂಟ್ ಎದುರು ಅಶ್ವಾರೂಢ ಬಸವೇಶ್ವರರ ಪ್ರತಿಮೆ ಸ್ಥಾಪಿಸಿದ್ದಾರೆ. ಅಂದರೆ ವಿಶ್ವದಲ್ಲೇ ಪ್ರಥಮ ಕಲ್ಯಾಣ ಸಂಸತ್ ಸ್ಥಾಪಿಸಿದ್ದ ವಿಶ್ವಗುರು ಬಸವಣ್ಣ ಅವರನ್ನು ಬ್ರಿಟಿಷರು ಅರ್ಥ ಮಾಡಿಕೊಂಡಷ್ಟು ನಮ್ಮ ದೇಶದ ಜನರೇ ಇನ್ನೂ ಅರ್ಥಮಾಡಿಕೊಳ್ಳಲಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೈಸೂರಿನ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನಶ್ರೀ ಕುಮಾರಸ್ವಾಮಿ, ಲಿಂಗಾಯತರದು ದೇವಾಲಯ ಸಂಸ್ಕೃತಿಯಲ್ಲ. ದೇಹಾಲಯದ ಸಂಸ್ಕೃತಿ ಉಳ್ಳವರು. ಉಳ್ಳವರು ದೇವಾಲಯವ ಮಾಡಿದರೆ ನಾನೇನು ಮಾಡಲಿ ಎನ್ನ ಕಾಲೇ ಕಂಬ ಎನ್ನ ಶಿರವೇ ಹೊನ್ನ ಕಳಶವಯ್ಯ ಎನ್ನುವ ಮೂಲಕ ಬಸವಣ್ಣನವರು ಭಕ್ತಿಪ್ರಿಯ ಕೂಡಲಸಂಗಮದೇವ ಎಂದಿದ್ದಾರೆ. ಹಾಗಾಗಿ ಬಸವಣ್ಣ ಓರ್ವ ವ್ಯಕ್ತಿಯಲ್ಲ ಒಂದು ಶಕ್ತಿಯಾಗಿದ್ದಾರೆ. ಆದ್ದರಿಂದ ಲಿಂಗಾಯತ ಮಹಾಸಭಾ ಟ್ರಸ್ಟ್ ಮುಂದೆ ದೊಡ್ಡ ಜವಾಬ್ದಾರಿಯಿದೆ ಎಂದರು.
    ಟ್ರಸ್ಟ್ ಕಾರ್ಯಾಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ಲಿಂಗಾಯತರು ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದು, ರಾಜಕಾರಣದಲ್ಲಿ ಸಮುದಾಯದ ಪ್ರಭಾವವಿದೆ. ಆದರೆ ಮಂಡ್ಯದಲ್ಲಿ ನಮ್ಮ ಸಮಾಜ ಇನ್ನೂ ಮುಂಚೂಣಿಗೆ ಬರಲಾಗಿಲ್ಲ. ಹಾಗಾಗಿ ಸಮುದಾಯವನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಟ್ರಸ್ಟನ್ನು ಅಸ್ತಿತ್ವಕ್ಕೆ ತರಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಎದುರಿನ ಉದ್ಯಾನದಲ್ಲಿ ಅಶ್ವಾರೂಢ ಬಸವೇಶ್ವರರ ವಿಗ್ರಹ ಸ್ಥಾಪಿಸಬೇಕು. ಎಲ್ಲ ಸರ್ಕಾರಿ ಕಚೇರಿಗಳಲ್ಲೂ ಬಸವೇಶ್ವರರ ಭಾವಚಿತ್ರ ಅಳವಡಿಸಬೇಕು. ಎಲ್ಲ ತಾಲೂಕಿನಲ್ಲೂ ಬಸವ ಭವನ ನಿರ್ಮಿಸಬೇಕು ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಲಾಗಿದೆ ಎಂದರು.
    ಟ್ರಸ್ಟ್ ಜಿಲ್ಲಾಧ್ಯಕ್ಷ ಎಂ.ಎಸ್.ಮಂಜುನಾಥ್ ಎಂ.ಬೆಟ್ಟಹಳ್ಳಿ, ಮಲ್ಲಿಕಾರ್ಜುನ್, ನಿಜಗುಣ, ವಿ.ಎಂ.ಮಹೇಂದ್ರ ಇತರರಿದ್ದರು. ಈ ವೇಳೆ ‘ಬಸವಮಾರ್ಗ’ ಕರಪತ್ರವನ್ನು ಕನ್ನಡ ಹೋರಾಟಗಾರ ಅಶೋಕ್ ಜಿ.ಲೋನಿ ಬಿಡುಗಡೆಗೊಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts