ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಳ್ಳುಪುರಕ್ರಾಸ್ ನಿಂದ ಕಸವನಹಳ್ಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಕಳೆದ 3 ವರ್ಷಗಳಿಂದಲೂ ಸಂಪೂರ್ಣ ಹದಗೆಟ್ಟು ಕೆಸರು, ಗುಂಡಿಗಳಿಂದ ಕೂಡಿದ್ದರಿಂದ ಭಾನುವಾರ ಗ್ರಾಮಸ್ಥರು ರಸ್ತೆಯಲ್ಲಿ ರಾಗಿ ಪೈರು ನಾಟಿ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆಯೂ ಕಸುವನಹಳ್ಳಿ, ಎಳ್ಳುಪುರ, ವರದನಹಳ್ಳಿ, ಪಂಡಿತಪುರ, ಜುಟ್ಟನಹಳ್ಳಿ, ತಿಂಡ್ಲು ಮುಂತಾದ ಗ್ರಾಮಗಳ ಮೂಲಕ ದೇವನಹಳ್ಳಿ ಹಾಗೂ ಕೈಗಾರಿಕಾ ಪ್ರದೇಶದ ಕಂಪನಿಗಳು, ಫ್ಯಾಕ್ಟರಿಗಳಿಗೆ ತೆರಳಲು ಸಾರ್ವಜನಿಕರು ಇದೇ ರಸ್ತೆಯನ್ನೇ ಅವಲಂಭಿಸಿದ್ದಾರೆ.
ಕನಿಷ್ಟ ದ್ವಿಚಕ್ರ ವಾಹನ ಸವಾರರು ಓಡಾಡಲು ಆಗದ ಪರಿಸ್ಥಿತಿ ಇದ್ದು, ರಸ್ತೆಯ ಸುತ್ತಮುತ್ತಲಿನ ಗ್ರಾಮಸ್ಥರು ಹೋರಾಟ ನಡೆಸಲು ಪೂರ್ವಭಾವಿ ಸಭೆ ನಡೆಸಿ, ಎಲ್ಲ ಹಂತದ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ನಂತರ 3ದಿನಗಳ ಗಡುವು ನೀಡಲು ತೀರ್ಮಾನಿಸಿದ್ದಾರೆ. ಬಳಿಕ ರಸ್ತೆ ಕಾಮಗಾರಿಗೆ ಮುಂದಾಗದಿದ್ದರೆ ಪಟ್ಟಣ ಪಂಚಾಯಿತಿ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ನಡೆಸಲು ತೀರ್ಮಾನಿಸಲಾಯಿತು.
ಗ್ರಾಮಸ್ಥರಾದ ಸಿದ್ದಲಿಂಗರಾಜು, ಅಜಯ್, ರಾಧಾಕೃಷ್ಣ, ಮಂಜುನಾಥ, ಆನಂದ್, ನಾಗರಾಜು, ನಾರಾಯಣಸ್ವಾಮಿ, ಕೆಂಪರಾಜು, ಪವನ್, ಬಿಸುವನಹಳ್ಳಿಯ ಲಕ್ಷ್ಮಣ, ಎಳ್ಳುಪುರ ರಾಮಕೃಷ್ಣಪ್ಪ, ವಿನೋದ್, ಮಧು, ಬಾಬು, ಜುಟ್ನಹಳ್ಳಿಯ ಮಹಾದೇವ್, ವರದನಹಳ್ಳಿಯ ಹರೀಶ್, ಪಂಡಿತಪುರದ ಜಯಣ್ಣ ಇದ್ದರು.
ಕಳೆದ 3 ವರ್ಷಗಳಿಂದ ರಸ್ತೆ ದುರಸ್ತಿ ಕಂಡಿಲ್ಲ. ಪ್ರತಿಬಾರಿ ದೂರು, ಮನವಿ ನೀಡಿದಾಗ ಮಣ್ಣು ಸುರಿದು ಸುಮ್ಮನಾಗುತ್ತಿದ್ದಾರೆ. ಶಾಶ್ವತ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, 3 ದಿನ ಗಡುವು ನೀಡಲಾಗುವುದು. ಸ್ಪಂದನೆ ನೀಡದಿದ್ದಲ್ಲಿ. ಭಾಗದ ಗ್ರಾಮಸ್ಥರು ಬೃಹತ್ ಜಾಥ ಮೂಲಕ ಹೋರಾಟಕ್ಕೆ ಮುಂದಾಗಲಾಗುವುದು.
| ಅಂಬರೀಶ್ ಕಸವನಹಳ್ಳಿ ಗ್ರಾಮಸ್ಥ