| ಕೆ.ಎನ್.ಮಹದೇವಸ್ವಾಮಿ ಕೊಡಸೋಗೆ ಗುಂಡ್ಲುಪೇಟೆ
ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಬಂಡೀಪುರ ಕಾಡನ್ನು ಬೆಂಕಿಯಿಂದ ರಕ್ಷಿಸಲು ಅರಣ್ಯ ಇಲಾಖೆ ಈ ಬಾರಿ ವಾಯುಪಡೆ ಸಹಾಯ ಪಡೆಯಲಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ವಾಯುಪಡೆ ಉನ್ನತಾಧಿಕಾರಿಗಳ ಜತೆ ಪಿಸಿಸಿಎಫ್ಗಳ ಸಭೆ ನಡೆಸಲಾಗಿದೆ. ಬಂಡೀಪುರ ಪ್ರದೇಶವನ್ನು ಸ್ಯಾಟಲೈಟ್ ಮೂಲಕ ಗಮನಿಸಲಾಗುತ್ತದೆ. ಬೆಂಕಿ ಅವಘಡಗಳಂತಹ ಸೂಚನೆ ಸಿಕ್ಕಲ್ಲಿ ಕೂಡಲೇ ಮಾಹಿತಿ ತಿಳಿಸಲಾಗುತ್ತದೆ. ಅಗತ್ಯಬಿದ್ದಲ್ಲಿ ವಾಯುಸೇನೆ ಹೆಲಿಕಾಪ್ಟರ್ಗಳನ್ನು ಕಳುಹಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಎಸ್.ಆರ್.ನಟೇಶ್ ವಿಜಯವಾಣಿಗೆ ತಿಳಿಸಿದ್ದಾರೆ.
ಈಗಾಗಲೇ ಎಲ್ಲ 13 ವಲಯಗಳಲ್ಲಿ ಫೈರ್ಲೈನ್ ಕಾಮಗಾರಿ ಆರಂಭವಾಗಿದೆ. ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಚಂಡಮಾರುತದಿಂದ ಅರಣ್ಯ ಪ್ರದೇಶದಲ್ಲಿ ಉತ್ತಮ ಮಳೆ ಆದ ಹಿನ್ನೆಲೆಯಲ್ಲಿ ಹುಲ್ಲು ಪೂರ್ಣವಾಗಿ ಒಣಗಿಲ್ಲ. ಆದರೂ ನಿಗದಿತ ಸ್ಥಳಗಳಲ್ಲಿ 4874 ಕಿ.ಮೀ. ಫೈರ್ಲೈನ್ ಮಾಡುವ ಮೂಲಕ ಅರಣ್ಯ ಇಲಾಖೆಯು ಬೆಂಕಿಯಿಂದ ಅರಣ್ಯ ರಕ್ಷಿಸಲು ಕ್ರಮಕೈಗೊಂಡಿದೆ.
ಡ್ರೋನ್ ಬಳಕೆ: ಡ್ರೋನ್ ಕ್ಯಾಮರಾಗಳ ಮೂಲಕ ಬೆಂಕಿಯನ್ನು ಗುರುತಿಸಿ ಕೂಡಲೇ ನಂದಿಸಲು ಸಿದ್ಧತೆ ನಡೆಸಲಾಗಿದೆ. ಇತ್ತೀಚಿಗೆ ಅಗ್ನಿಶಾಮಕ ಅಧಿಕಾರಿಗಳು, ಕೇರಳ ಹಾಗೂ ತಮಿಳುನಾಡಿನ ಅರಣ್ಯಾಧಿಕಾರಿಗಳ ಜತೆ ಸಮನ್ವಯ ಸಮಿತಿಯ ಸಭೆ ನಡೆಸಿ ಸಹಕಾರ ನೀಡುವ ಬಗ್ಗೆ ಚರ್ಚಿಸಿದ್ದಾರೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದ್ದರೂ ತರಬೇತಿ ಗಾರ್ಡ್ಗಳನ್ನು ಸೇವೆಗೆ ಕರೆಸಿಕೊಳ್ಳಲಾಗುತ್ತದೆ. ಎಲ್ಲ ವಲಯಗಳಿಂದ 1 ಸಾವಿರ ಫೈರ್ ವಾಚರ್ ನೇಮಕ ಮಾಡಿ ಹಗಲು-ರಾತ್ರಿ ಗಸ್ತು ನಡೆಸಲಾಗುವುದು. ಜಂಗಲ್ ಲಾಡ್ಜ್ ರೆಸಾರ್ಟ್ ಹಾಗೂ ಖಾಸಗಿ ರೆಸಾರ್ಟ್ನವರ ಜತೆ ಸಭೆ ನಡೆಸಿ ಅವರಿಂದ ತುರ್ತುಸಹಾಯಕ್ಕೆ ವಾಹನ ಹಾಗೂ ಸಿಬ್ಬಂದಿ ಸಹಾಯ ಪಡೆಯಲಾಗುತ್ತದೆ.
ಕಾಡಂಚಿನ ಗ್ರಾಮಗಳಲ್ಲಿ ಈಗಾಗಲೇ ಡಿಆರ್ಎಫ್ಒ, ಆರ್ಎಫ್ಒ, ಎಸಿಎಫ್ಗಳ ಸಭೆ ನಡೆಸಲಾಗಿದೆ. ಬೆಂಕಿ ಅವಘಡ ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಸಾರ್ವಜನಿಕರ ನೆರವನ್ನೂ ಕೋರಿದೆ. ಆಗಾಗ್ಗೆ ಮಳೆ ಬಿದ್ದ ಪರಿಣಾಮ ಹುಲ್ಲು ಇನ್ನೂ ಹಸಿರಾಗಿದೆ. ಹಾಗಾಗಿ ಫೈರ್ ಲೈನ್ ನಿರ್ಮಾಣ ವಿಳಂಬವಾಗುತ್ತಿದೆ.