ಬೆಂಗಳೂರು: ಶಿಕ್ಷಣ, ಉದ್ಯೋಗದಲ್ಲಿ ಮೀಸಲು ಪ್ರಮಾಣ ಹೆಚ್ಚಿಸಿದ ರಾಜ್ಯ ಸರ್ಕಾರಕ್ಕೆ ಋಣ ಸಂದಾಯ ಹಾಗೂ ಬಿಜೆಪಿಗೆ ಹೆಚ್ಚಿನ ಬಲ ತುಂಬುವ ಉದ್ದೇಶದಿಂದ ಬಳ್ಳಾರಿಯಲ್ಲಿ ನ.20ರಂದು ಎಸ್ಟಿ ಮೋರ್ಚಾ ನವಶಕ್ತಿ ಸಮಾವೇಶ ಆಯೋಜಿಸಲಿದ್ದು, 10 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಎಸ್.ಟಿ. ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಈ ವಿಷಯ ತಿಳಿಸಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಈ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಕೇಂದ್ರ ಸರಕಾರದ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಅರ್ಜುನ್ ಮುಂಡ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಂಸದೀಯ ಮಂಡಳಿಯ ಸದಸ್ಯರೂ ಆದ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ, ಕೇಂದ್ರ – ರಾಜ್ಯ ಸರಕಾರಗಳ ಸಚಿವರು, ಕೋರ್ ಕಮಿಟಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಎಲ್ಲ ಎಸ್ಟಿ ಸಮುದಾಯದವರು ಭಾಗವಹಿಸಿ ಮೀಸಲಾತಿ ಹೆಚ್ಚಳಕ್ಕೆ ಸಂತಸ ಸೂಚಿಸಿ ಸಮಾವೇಶವನ್ನು ವಿಜಯೋತ್ಸವದಂತೆ ಆಚರಿಸುವರು. 68ಕ್ಕೂ ಹೆಚ್ಚು ಬುಡಕಟ್ಟು ಕಲಾ ತಂಡಗಳು ಪಾಲ್ಗೊಳ್ಳಲಿವೆ. ಕೊಪ್ಪಳ, ರಾಯಚೂರು, ಯಾದಗಿರಿ, ಚಿತ್ರದುರ್ಗ, ಬಳ್ಳಾರಿ, ಹಳೆ ಮೈಸೂರು, ಮಧ್ಯ ಕರ್ನಾಟಕದ ಸುತ್ತಲಿನ ಪ್ರದೇಶಗಳಿಂದ 6 ಲಕ್ಷ ಜನರನ್ನು ನಿರೀಕ್ಷಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಈ ಸಮಾವೇಶಕ್ಕೆ 4 ಲಕ್ಷ ಜನರು ಬರಲಿದ್ದಾರೆ. 6,200 ಬಸ್ ವ್ಯವಸ್ಥೆ ಮಾಡಲಾಗಿದೆ. 15ರಿಂದ 18 ಸಾವಿರ ಕ್ರೂಸರ್ ವಾಹನ ವ್ಯವಸ್ಥೆ ಇದೆ. ಬಳ್ಳಾರಿಯಲ್ಲಿ 24 ಕಡೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಪ್ಪರಾಜು ಹವಾಲ್ದಾರ್ ತಿಳಿಸಿದರು.
ರಾಜ್ಯ ಉಪಾಧ್ಯಕ್ಷ ನಿರ್ಮಲ್ಕುಮಾರ್ ಸುರಾಣ ಹಾಗೂ ಪಕ್ಷದ ಪ್ರಮುಖರು, ಸಚಿವರು ಈ ಸಂಬಂಧ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ರಾಷ್ಟ್ರಪತಿಗಳನ್ನಾಗಿ ದ್ರೌಪದಿ ಮುರ್ಮು ಅವರ ಆಯ್ಕೆ, ರಾಜ್ಯದಲ್ಲಿ ಪ್ರತ್ಯೇಕ ಎಸ್ಟಿ ಸಚಿವಾಲಯ ರಚನೆ ಮತ್ತಿತರ ಕ್ರಮವನ್ನು ಅವರು ಅಭಿನಂದಿಸಿದರು. ಆದಿವಾಸಿ ಗೌರವ ದಿವಸ ಆಚರಣೆ ಮೂಲಕ ಆದಿವಾಸಿಗಳಿಗೆ ಗೌರವ ಕೊಟ್ಟಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಮರ್ಪಿಸಿದರು.
ಬಿಜೆಪಿ ಮುಖಂಡರು ಮತ್ತು ಬಿಜೆಪಿ ಸರಕಾರವು ಮೀಸಲಾತಿ ಹೆಚ್ಚಳಕ್ಕೆ ವಿರೋಧಿಗಳು ಎಂಬ ಆಕ್ಷೇಪ ಮತ್ತು ಸುಳ್ಳು ಮಾಹಿತಿಯನ್ನು ಕಾಂಗ್ರೆಸ್ ಮುಖಂಡರು ಜನರ ಮನದಲ್ಲಿ ಬಿತ್ತಿ, ಮೂಗಿಗೆ ತುಪ್ಪ ಹಚ್ಚುವ ಕಾರ್ಯ ಮಾಡಿದ್ದರು ಎಂದು ತಿಪ್ಪರಾಜು ಹವಾಲ್ದಾರ್ ಕಿಡಿಕಾರಿದರು.
ನನ್ನ ಎಮ್ಮೆ ಸಾವಿಗೆ ಗ್ರಾಮದ ಮೇಲೆ ಹಾರಿ ಹೋದ ಹೆಲಿಕಾಪ್ಟರ್ ಕಾರಣ! ಪೈಲಟ್ ವಿರುದ್ಧ ರೈತನ ದೂರು
ಯಕ್ಷಗಾನಕ್ಕೆ ಅವಮಾನ ಮಾಡಿದ್ರಾ ಸಿದ್ದರಾಮಯ್ಯ..? ಕ್ಷಮೆ ಕೇಳಿ ಅಂತಿದೆ ಬಿಜೆಪಿ!
ಬ್ರೈನ್ ಟ್ಯೂಮರ್ ಶಸ್ತ್ರಚಿಕಿತ್ಸೆ ಫಲಕಾರಿಯಾದರೂ ಹೃದಯಾಘಾತದಿಂದ ನಿರ್ದೇಶಕ ಮುರಳಿ ಕೃಷ್ಣ ವಿಧಿವಶ