ಬಳ್ಳಾರಿ: ಕಳೆದ ಕೆಲವು ತಿಂಗಳಿಂದ ಸರ್ಕಾರ ಬಾಡಿಗೆ ಹಣ ನೀಡದ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯೊಬ್ಬರು ತಮ್ಮ ಚಿನ್ನವನ್ನು ಅಡವಿಟ್ಟು ಅಂಗನವಾಡಿ ಬಾಡಿಗೆ ಕಟ್ಟಿರುವ ಮನಕಲಕುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಬಳ್ಳಾರಿಯ ಮರಿಸ್ವಾಮಿಮಠ ಪ್ರದೇಶದಲ್ಲಿರುವ ಅಂಗನವಾಡಿ ಕೇಂದ್ರದ ಪರಿಸ್ಥಿತಿ ಇದು. ಅಂಗನವಾಡಿ ಕಾರ್ಯಕರ್ತೆ ಲೀಲಾವತಿ ಅವರು 6 ತಿಂಗಳ ಹಿಂದೆ ಖಾಸಗಿ ಲೇವಾದೇವಿ ಅವರ ಬಳಿ ಎರಡು ರೂಪಾಯಿ ಬಡ್ಡಿಯಂತೆ ಹಣ ತಂದು ಬಾಡಿಗೆ ಕಟ್ಟಿದ್ದರು. ಇದೀಗ ತನ್ನ ಬಳಿ ಇದ್ದ 20 ಗ್ರಾಂ ಚಿನ್ನದ ಒಡವೆವನ್ನು ಗಿರವಿ ಇಟ್ಟು ಕಟ್ಟಡದ ಬಾಡಿಗೆಯನ್ನು ಭರಿಸಿದ್ದಾರೆ.
ಕಳೆದ ಹತ್ತು ತಿಂಗಳಿಂದ ಸರ್ಕಾರ ಬಾಡಿಗೆ ನೀಡದ ಹಿನ್ನೆಲೆಯಲ್ಲಿ ಲೀಲಾವತಿ ಅವರು ಆಭರಣವನ್ನು ಗಿರವಿ ಇಟ್ಟಿದ್ದಾರೆ. ಖಾಸಗಿ ಕಟ್ಟಡದಲ್ಲಿ ಅಂಗನವಾಡಿ ನಡೆಯುತ್ತಿದ್ದು, ಪ್ರತೀ ತಿಂಗಳು ನಾಲ್ಕು ಸಾವಿರ ಬಾಡಿಗೆ ಕಟ್ಟಬೇಕಿದೆ. ಆದರೆ, ಸರ್ಕಾರ ಹಣ ನೀಡದ ಹಿನ್ನೆಲೆಯಲ್ಲಿ ಕಟ್ಟಡವನ್ನು ಖಾಲಿ ಮಾಡುವಂತೆ ಮಾಲೀಕರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಲೀಲಾವತಿ ತಮ್ಮ ಒಡವೆಯನ್ನೇ ಗಿರವಿ ಇಟ್ಟಿದ್ದಾರೆ.
ಬಳ್ಳಾರಿ ನಗರದಲ್ಲಿರುವ ಒಟ್ಟು 220 ಅಂಗನಾವಾಡಿಗಳಲ್ಲಿ 138 ಅಂಗನವಾಡಿಗಳು ಖಾಸಗಿ ಕಟ್ಟಡದಲ್ಲಿ ನಡೆಯುತ್ತಿವೆ. ಆದರೆ, ಸರ್ಕಾರ 138 ಕಟ್ಟಡಗಳಿಗೂ ಕಳೆದ 10 ತಿಂಗಳಿಂದ ಹಣ ನೀಡಿಲ್ಲ ಎಂದು ತಿಳಿದುಬಂದಿದೆ. ಕೆಲ ಅಂಗನವಾಡಿ ಕಾರ್ಯಕರ್ತೆಯರು ಐದು, ಹತ್ತು ಪರ್ಸೆಂಟ್ನಂತೆ ಬಡ್ಡಿಗೆ ಹಣ ಪಡೆದು ಬಾಡಿಗೆ ಕಟ್ಟುತ್ತಿದ್ದಾರೆ.
ಸರ್ಕಾರ ಜನರಿಗೆ ಒಂದಾದ ಮೇಲೆ ಒಂದು ಉಚಿತ ಭಾಗ್ಯಗಳನ್ನು ಕೊಡುತ್ತಿದೆ. ಆದರೆ, ಬಹುತೇಕ ಬಡ ಮಕ್ಕಳಿರುವ ಅಂಗನವಾಡಿಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ಈಗಲಾದರೂ ಹಣ ಬಿಡುಗಡೆ ಮಾಡುವಂತೆ ಕಾರ್ಯಕರ್ತೆಯರು ಆಗ್ರಹಿಸಿದ್ದಾರೆ. (ದಿಗ್ವಿಜಯ ನ್ಯೂಸ್)