ಮಂಡ್ಯ: ಮಕ್ಕಳಿಗೆ ಶಿಕ್ಷಣದ ಜತೆಗೆ ಉತ್ತಮವಾದ ಮಾನವೀಯ ಮೌಲ್ಯ ಬೆಳೆಸಲು ಹೆಚ್ಚು ಒತ್ತು ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ತಿಳಿಸಿದರು.
ತಾಲೂಕಿನ ಕೊಮ್ಮೇರಹಳ್ಳಿ ಗ್ರಾಮದ ವಿಶ್ವಮಾನವ ಕ್ಷೇತ್ರದ ಆವರಣದಲ್ಲಿ ಆಯೋಜಿಸಿದ್ದ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ 78ನೇ ಜಯಂತ್ಯುತ್ಸವ ಹಾಗೂ ವಾರ್ಷಿಕ ವೈಭವ-2023ರ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಮತ್ತು ಮೌಲ್ಯವನ್ನು ವಿದ್ಯಾರ್ಥಿಗಳಿಗೆ ಕಲಿಸಿ ಕೊಡುತ್ತಾರೆ. ಇಲ್ಲಿ ಕಲಿತವರು ದೇಶ ಸೇರಿದಂತೆ ಬೇರೆ ವಿದೇಶಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ಹೇಳಿದರು.
ಶ್ರೀಮಠದ ವಿದ್ಯಾರ್ಥಿಗಳಾಗಿರುವುದು ತಮ್ಮೆಲ್ಲರ ಅದೃಷ್ಟ. ಒಬ್ಬ ವಿದ್ಯಾರ್ಥಿ ಒಬ್ಬ ಪ್ರಜೆಯಾಗಬೇಕಾದರೆ, ಒಬ್ಬ ವಿದ್ಯಾರ್ಥಿ ದೇಶದ ಭವಿಷ್ಯವಾಗಬೇಕಾದರೆ ಪುಸ್ತಕದ ಜ್ಞಾನ ಅವಶ್ಯಕತೆ ಇರುತ್ತದೆ. ಸಮಾಜದಲ್ಲಿ ಬದುಕಲು, ದೇಶದ ಸಂಸ್ಕೃತಿಯನ್ನು ಮುಂದುವರಿಸಲು ತಾನು ಇತಿಹಾಸವನ್ನು ಕಲಿತು ಭವಿಷ್ಯವನ್ನು ಸೃಷ್ಟಿಸಿಕೊಳ್ಳಲು ಆತನಿಗೆ ಮಾನವೀಯ ಮೌಲ್ಯ ಅತ್ಯವಶ್ಯಕವಾಗಿದೆ ಎಂದರು.
ಡಿಡಿಪಿಯು ಉಮೇಶ್ ಮಾತನಾಡಿ, ನಮ್ಮ ನಾಡಿನಲ್ಲಿ ಹಲವು ಗಣ್ಯರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಅವರ ಸಾಧನೆ ಹಾದಿಯನ್ನು ತಿಳಿದುಕೊಂಡು ಮತ್ತಷ್ಟು ಸಾಧನೆಯನ್ನು ತಾವೆಲ್ಲರೂ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು . ಶಾಲೆಯ ಆಡಳಿತಾಧಿಕಾರಿ ಡಾ.ಎನ್.ಶಿವರಾಂರೆಡ್ಡಿ, ಡಾ.ಎ.ಟಿ ಶಿವರಾಮು, ಪ್ರಾದೇಶಿಕ ಸಾರಿಗೆ ಇಲಾಖೆ ಅಧೀಕ್ಷಕ ಪ್ರಸಾದ್, ಸಾಹಿತಿ ಮಾಯೀಗೌಡ ಇತರರಿದ್ದರು.