ದಾವಣಗೆರೆ: ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧಿಸುವುದಾಗಿ ಘೋಷಿಸಿರುವುದಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ತೀವ್ರ ವಿರೋಧ ವ್ಯಕ್ತಪಡಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಮನ ಪರಂಪರೆಯನ್ನು ನಾಶ ಮಾಡುವ ಹುನ್ನಾರದಲ್ಲಿ ಕಾಂಗ್ರೆಸ್ ಇದ್ದು, ಈ ಪಕ್ಷದ ನಿಲುವು ಸರಿಯಿಲ್ಲ. ರಾಮನಿಗೆ ಸಂಬಂಧಿಸಿದ ಪ್ರತಿಯೊಂದು ರಚನೆಯನ್ನು ಕೆಡವಲು ಪ್ರಯತ್ನಿಸುತ್ತಿದೆ. ನಾವು ನಂಬಿದ ಇತಿಹಾಸಗಳ ಅಂಶವನ್ನು ಅಳಿಸಿಹಾಕಲು ಕಾಂಗ್ರೆಸ್ ಮುಂದಾಗಿದೆ ಎಂದು ಆರೋಪಿಸಿದರು.
ಬಜರಂಗದಳ ನಿಷೇಧ ಮಾಡಲು ಹೊರಟಿರುವುದು ಅಲ್ಪಸಂಖ್ಯಾತರ ಓಲೈಕೆಗಾಗಿ. ಬಹುಸಂಖ್ಯಾತ ಜನ ಸಮುದಾಯಕ್ಕೆ ನೋವುಂಟು ಮಾಡುವುದು ತರವಲ್ಲ. ಕಾಂಗ್ರೆಸ್ನ ಈ ನಿಲುವಿಗೆ ರಾಜ್ಯದ ಜನತೆ ಮೇ 10ರಂದು ಉತ್ತರ ಕೊಡಲಿದ್ದಾರೆ ಎಂದರು.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ರಾಜ್ಯದ ಅಭಿವೃದ್ಧಿ ಮತ್ತು ಜನತೆಗೆ ನೀಡುವ ಸವಲತ್ತು ಹೇಳುವ ಮೂಲಕ ಮತ ಕೇಳಲಿ. ಜಾತಿ, ಧರ್ಮ ಆಧರಿತ ಮತ ಕೇಳುವುದು ಸರಿಯಲ್ಲ. ತೋರ್ಪಡಿಕೆಗೆ ಅಹಿಂದ ಮುಖಂಡರು ಎಂದು ಕರೆಸಿಕೊಳ್ಳುವವರು ಇಂತಹ ಹೇಳಿಕೆ ನೀಡಬಾರದು ಎಂದು ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಜಿಲ್ಲಾ ವಕ್ತಾರ ಶಿವಶಂಕರ್, ದೂಡಾ ಸದಸ್ಯ ಲಕ್ಷ್ಮಣ್, ಮಾಜಿ ಮೇಯರ್ ಎಸ್.ಟಿ. ವೀರೇಶ್, ಗುಜರಾತ್ ಶಾಸಕ ಕಾಂತಿಭಾಯಿ ಮೋರ್ಬಿ ಇದ್ದರು.