ಮೂಡುಬಿದಿರೆ/ಕಾರ್ಕಳ: ಮೂಡುಬಿದಿರೆ ಸಾವಿರ ಕಂಬದ ಬಸದಿ ಬಳಿ ಇರಿಸಲಾಗಿದ್ದ 15.5 ಅಡಿ ಎತ್ತರ ಬಾಹುಬಲಿ ಮೂರ್ತಿಯನ್ನು ಸೋಮವಾರ ಕಾರ್ಕಳದ ಬಜಗೋಳಿ ಸುಮ್ಮಗುತ್ತಿನ ಧರ್ಮಶಾಲೆಗೆ ಕೊಂಡೊಯ್ದು ಸ್ಥಾಪನೆ ಮಾಡಲಾಗಿದೆ.
ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು ಬೆಳಗ್ಗೆ ಜೈನ ಮಠ ಬಳಿ ಮೂರ್ತಿ ಪ್ರಸ್ತಾನಕ್ಕೆ ಚಾಲನೆ ನೀಡಿದರು. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಬಸದಿಗಳ ಮೊಕ್ತೇಸರರಾದ ಪಟ್ನಶೆಟ್ಟಿ ಸುದೇಶ್ ಕುಮಾರ್, ಆನಡ್ಕ ದಿನೇಶ್ ಕುಮಾರ್, ಮಠದ ವ್ಯವಸ್ಥಾಪಕ ಸಂಜಯಂತ್ ಕುಮಾರ್, ವಕೀಲ ಪದ್ಮಪ್ರಸಾದ್ ಜೈನ್ ಸಹಿತ ಶ್ರಾವಕರು ಉಪಸ್ಥಿತರಿದ್ದರು.
ಚಾರುಕೀರ್ತಿ ಶ್ರೀಗಳ ಜನ್ಮ ಸ್ಥಳವಾದ ಬಜಗೋಳಿ ಸುಮ್ಮಗುತ್ತು ಬಂಡಸಾಲೆಯಲ್ಲಿ ಈ ಮೂರ್ತಿಯನ್ನು ಸೋಮವಾರ ಸ್ಥಾಪಿಸಲಾಗಿದ್ದು, ಪ್ರತಿಷ್ಠಾಪನೆ ದಿನಾಂಕ ಇನ್ನು ನಿಗದಿಯಾಗಬೇಕಿದೆ. ಮೂರ್ತಿ ಸ್ಥಾಪನೆ ಸಂದರ್ಭ ಚಾರುಕೀರ್ತಿ ಭಟ್ಟಾರಕ ಶ್ರೀಗಳು, ಮಾಜಿ ಸಚಿವ ಅಭಯಚಂದ್ರ ಜೈನ್, ಸುಮ್ಮಗುತ್ತಿನ ಪ್ರಮುಖರು ಉಪಸ್ಥಿತರಿದ್ದರು.
ಹದಿನೈದೂವರೆ ಅಡಿ ಎತ್ತರದ ವಿಗ್ರಹ: ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು ಜಾರ್ಖಂಡ್ನ ಸಮ್ಮೇದಗಿರಿಯಲ್ಲಿ ಮೂರ್ತಿ ಪ್ರತಿಷ್ಠಾಪಿಸುವ ಉದ್ದೇಶದಿಂದ ಮಠದ ಭಕ್ತರಾದ ಬಿ.ಸಿ.ಕಾಸ್ಲಿವಾಲ್ ಎಂಬವರ ಮೂಲಕ ಕೆತ್ತಿಸಿದ್ದರು. 2013ರಲ್ಲಿ ಶಿರಾದಿಂದ ಕರಿಶಿಲೆ ತರಿಸಿದ್ದು, ಕೊಯಮತ್ತೂರಿನ ಶಿಲ್ಪಿ ಮಾರಿಮುತ್ತು ನೇತೃತ್ವದಲ್ಲಿ ಕಾರ್ಕಳದ ಜೋಡುಕಟ್ಟೆಯಲ್ಲಿ ಕೆತ್ತಲಾಗಿತ್ತು. 16 ಟನ್ ತೂಕದ ಮೂರ್ತಿಯನ್ನು ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಸಮ್ಮೇದಗಿರಿಗೆ ಸಾಗಿಸುವುದು ಸಾಧ್ಯವಾಗಿರಲಿಲ್ಲ.