ಬಾಗಲಕೋಟೆ: ಜಿಲ್ಲೆಯ ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು, ತ್ರಿವಳಿ ನದಿಗಳಲ್ಲಿ ನೀರಿನ ಪ್ರಮಾಣ ಹೇಳಿಕೊಳ್ಳುವ ಮಟ್ಟಿಗೆ ತಗ್ಗಿಲ್ಲ. ಕೃಷ್ಣೆ ರೌದ್ರವತಾರ ತಾಳಿದ್ದು, ಈವರೆಗೆ ಪ್ರವಾಹಕ್ಕೆ 62 ಗ್ರಾಮಗಳು ಬಾಧಿತವಾಗಿವೆ.
ಮಂಗಳವಾರ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ 390839 ಕ್ಯೂಸೆಕ್ ಹರಿದು ಬಂದಿದೆ. ಘಟಪ್ರಭಾ ನದಿಗೆ 60418 ಹಾಗೂ ಮಲಪ್ರಭಾ ನದಿಗೆ 17594 ಕ್ಯೂಸೆಕ್ ಒಳ ಹರಿವು ಇದೆ. ಕಳೆದ ಏಳು ದಿನಗಳಲ್ಲಿ ಪ್ರವಾಹಕ್ಕೆ 62 ಗ್ರಾಮಗಳು ಬಾಧಿತವಾಗಿವೆ. ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಜಮಖಂಡಿ ತಾಲೂಕಿನಲ್ಲಿ 2, ರಬಕವಿ-ಬನಹಟ್ಟಿ ತಾಲೂಕಿನಲ್ಲಿ 7, ಮುಧೋಳ ತಾಲೂಕಿನಲ್ಲಿ 2 ಸೇರಿ ಈ ವರೆಗೆ 11 ಜಾನುವಾರುಗಳು ಮೃತಪಟ್ಟಿವೆ. ಈ ವರೆಗೆ 84 ಮನೆಗಳು ಭಾಗಶಃ ಹಾನಿಯಾಗಿವೆ. ಕಾಳಜಿ ಕೇಂದ್ರದಲ್ಲಿ 7061 ನಿರಾಶ್ರಿತರು ಆಶ್ರಯ ಪಡೆದುಕೊಂಡಿದ್ದಾರೆ. 8979 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ, 563 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ತಿಳಿಸಿದ್ದಾರೆ.