ಬಾಗಲಕೋಟೆ: ಇಂಧನ, ಅಡುಗೆ ಅನಿಲ ದರ ಏರಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ನಗರದ ಜಿಲ್ಲಾಡಳಿತ ಭವನ ಎದುರು ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಬಜೆಟ್ ಪ್ರತಿ ಹಾಗೂ ಕೇಂದ್ರ ಸರ್ಕಾರ ಪ್ರತಿಕೃತಿಯನ್ನು ಹಿಡಿದುಕೊಂಡು ಎತ್ತಿನ ಬಂಡಿ, ಆಟೋ, ಟಂಟಂ, ಲಾರಿ, ಕಾರುಗಳೊಂದಿಗೆ ನಗರದ ಬಸವೇಶ್ವರ ವೃತ್ತದಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕೇಂದ್ರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಚಂದ್ರಶೇಖರ ರಾಠೋಡ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅಂಬಾನಿ, ಅದಾನಿಯಂತಹ ಶ್ರೀಮಂತರ ಗುಲಾಮಗಿರಿ ಮಾಡುತ್ತ ಬಡವರು, ರೈತರು, ಕಾರ್ಮಿಕರ ಮೇಲೆ ಗದಾ ಪ್ರಹಾರ ನಡೆಸುತ್ತಿದ್ದಾರೆ. ಕೋವಿಡ್ನಿಂದ ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ಬಜೆಟ್ನಲ್ಲಿ ಸೂಕ್ತವಾದ ನೆರವು ನೀಡಿಲ್ಲ. ಬದಲಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿ ಮತ್ತಷ್ಟು ಹೊರೆ ಮಾಡಿದ್ದಾರೆ. ಇಂತಹ ನೀತಿಗೆಟ್ಟ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ ಎಂದು ಆರೋಪಿಸಿದರು.
ರೈತ ವಿರೋಧಿ 3 ಕಾನೂನುಗಳನ್ನು ಜಾರಿಗೊಳಿಸಿ ಅನ್ನದಾತರಿಗೆ ಕೊಡಲಿ ಪೆಟ್ಟು ನೀಡಿದ್ದಾರೆ. ಕೂಡಲೇ ಇಂಧನ ಬೆಲೆ ಕಡಿತಗೊಳಿಸಬೇಕು. ಇಲ್ಲವಾದಲ್ಲಿ ಜನ ತಕ್ಕ ಬಿಸಿ ಮುಟ್ಟಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಕರವೇ ಅಧ್ಯಕ್ಷ ರಮೇಶ ಬದ್ನೂರ ಮಾತನಾಡಿ, ಕೋವಿಡ್ ಬಳಿಕ ದೇಶದಲ್ಲಿ ಬಡವರು, ಕಾರ್ಮಿಕರು, ರೈತರು, ಮಧ್ಯಮ ವರ್ಗದ ಜನರ ಬದುಕು ದುಸ್ತರವಾಗಿದೆ. ಅತಿಯಾದ ತೆರಿಗೆ, ಅಬಕಾರಿ ಸುಂಕ ಏರಿಸುವ ಮೂಲಕ ಕೇಂದ್ರ ಸರ್ಕಾರ ದೊಡ್ಡಮಟ್ಟದ ಆಘಾತ ನೀಡಿದ್ದು, ಜನರ ನಂಬಿಕೆಗೆ ದ್ರೋಹ ಬಗೆಯುತ್ತಿದೆ ಎಂದು ಕಿಡಿಕಾರಿದರು.
ಲಾರಿ ಮಾಲೀಕರ ಸಂಘದ ಅಧ್ಯಕ್ಷ ಡಿ.ಕೆ.ಚವ್ಹಾಣ್, ಉಪಾಧ್ಯಕ್ಷ ಆನಂದ ಶಿವಂಗಿ, ಆಟೋ ಚಾಲಕರ ಸಂಘದ ಅಧ್ಯಕ್ಷ ವಿಜಯ ಕಾಳೆ, ಮುಖಂಡರಾದ ಬಸವರಾಜ ಧರ್ಮಂತಿ, ಮಲ್ಲು ಕಟ್ಟಿಮನಿ, ವಿನೀತ ಮೆಲೀನಮನಿ, ಆತ್ಮರಾಮ ನೀಲನಾಯಕ, ಪ್ರವೀಣ ಪಾಟೀಲ, ರವಿ ಶಿಂದೆ ಪ್ರತಿಭಟನೆ ನೇತೃತ್ವ ವಹಿಸಿದ್ದರು.