ಬಾಗಲಕೋಟೆ: ಅವಧಿ ಮುಗಿಯುವವರೆಗೂ ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತಾರೆ. ಆ ಬಗ್ಗೆ ಯಾವುದೇ ಚರ್ಚೆಯನ್ನು ನಾವು ನಡೆಸಿಲ್ಲ ಎಂದು ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಹೇಳಿದರು.
ಬಾಗಲಕೋಟೆಯಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್ ಪಕ್ಷದಿಂದ ಬಿಜೆಪಿಗೆ ಹೋದವರೆಲ್ಲರೂ ಡಿನ್ನರ್ ಪಾರ್ಟಿ ನಡೆಸಿದ್ದೇವೆ ಅಷ್ಟೆ. ಅದರಲ್ಲಿ ನಾವು ಮೂರು ಜನ ವಿಧಾನ ಪರಿಷತ್ ಸದಸ್ಯರನ್ನು ಸಚಿವರನ್ನಾಗಿ ಮಾಡಬೇಕು ಎನ್ನುವ ಬಗ್ಗೆ ಅಷ್ಟೆ ಮಾತನಾಡಿದ್ದೇವೆ ಎಂದರು.
ನಾವು ಬಿಜೆಪಿಗೆ ಬಂದಾಗಿದೆ, ಕೆಲವರು ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರಾಗಿ ಪಕ್ಷ ಸಂಘಟನೆಯಲ್ಲಿ ಇದ್ದೇವೆ. ಈಗ ನಾವು ವಲಸಿಗರು ಎನ್ನುವ ಪ್ರಶ್ನೆಯೇ ಇಲ್ಲ. ರೇಣುಕಾಚಾರ್ಯ ಏನೋ ಪದ ತಪ್ಪಾಗಿ ಹೇಳಿದ್ದಾರೆ. ಆ ಬಗ್ಗೆ ನಮಗೇನು ಬೇಸರ ಇಲ್ಲ ಎಂದು ತಿಳಿಸಿದರು.
ಇನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ ಅವರ ಆತ್ಮಹತ್ಯೆ ಮುಂದಾಗಿರುವ ವಿಚಾರ ನಮಗೆ ಗೊತ್ತಿಲ್ಲ. ನಮಗೂ ಅವರಿಗೂ ಸಂಬಂಧ ಇರಲಿಲ್ಲ. ನನ್ನನ್ನು ಮುಂಬೈಗೆ ವಿಮಾನ ಹತ್ತಿಸಿದ್ದು ಆರ್.ಅಶೋಕ ಹೊರತು ಸಂತೋಷ ಅಲ್ಲ ಎಂದರು.