ಬಾದಾಮಿ: ಸರ್ಕಾರದಿಂದ ವಿತರಿಸುವ ಉಚಿತ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಪಟ್ಟಣದ ಕಳ್ಳಿಪೇಟೆ ಓಣಿಯಲ್ಲಿ ತುಂಬಿಕೊಂಡು ತೆರಳುತ್ತಿದ್ದ ಟಂಟಂ ವಾಹನವನ್ನು ತಡೆದು ಪ್ರಕರಣ ದಾಖಲಿಸಲಾಗಿದೆ.
ಸೋಮವಾರ ಸಂತೆ ನಡೆಯುವ ಜಾಗ (ಕಳ್ಳಿಪೇಟೆ) ಹತ್ತಿರ ವಿಧೆಡೆಯಿಂದ ಪ್ಲಾಸ್ಟಿಕ್ ಚೀಲಗಳಲ್ಲಿ ಅಂದಾಜು 15 ಕ್ವಿಂಟಾಲ್ಗೂ ಅಧಿಕ ಅಕ್ಕಿಯನ್ನು ಟಂಟಂನಲ್ಲಿ ಅಕ್ರಮವಾಗಿ ತುಂಬಿಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಸ್ಥಳೀಯ ಆಹಾರ ನಿರೀಕ್ಷಕರ ತಂಡ ದಾಳಿ ನಡೆಸಿ, ಅಕ್ಕಿಯನ್ನು ವಶಪಡಿಸಿಕೊಂಡಿದ್ದು, ಟಂಟಂ ವಾಹನ ಚಾಲಕ ಪರಾರಿಯಾಗಿದ್ದಾನೆ.
ಟಂಟಂನಲ್ಲಿ ಒಂದು ವಿದ್ಯುತ್ ತೂಕದ ಯಂತ್ರ, ವಿನಾಯಕ ಕಿರಾಣಿ ಸ್ಟೋರ್ಸ್ ಬೇಲೂರ ಎಂಬ ಬಿಲ್ಬುಕ್ ಇದ್ದು, ವಾಹನದಲ್ಲಿ ಅಕ್ಕಿ ಮೂಟೆಗಳಿದ್ದವು. ಅಧಿಕಾರಿಗಳು ಅಕ್ಕಿ ಮೂಟೆಗಳನ್ನು ವಶಪಡಿಸಿಕೊಂಡು, ಟಂಟಂ ವಾಹನವನ್ನು ಪೊಲೀಸ್ ಇಲಾಖೆಗೆ ಒಪ್ಪಿಸಿದ್ದಾರೆ.