ಬಾದಾಮಿ: ರೈತರಿಗೆ ಅನುಕೂಲ, ಉತ್ತರ ಕರ್ನಾಟಕದಲ್ಲಿ ಔದ್ಯೋಗಿಕ ಕ್ಷೇತ್ರ ಅಭಿವೃದ್ಧಿ, ಬಡ ಯುವಕರಿಗೆ ಉದ್ಯೋಗ ಅವಕಾಶ ನೀಡುವ ಉದ್ದೇಶದೊಂದಿಗೆ 12 ತಿಂಗಳು ಕಬ್ಬು ನುರಿಜನೆ ಹಾಕಿಕೊಳ್ಳಲಾಗಿದೆ ಎಂದು ಬೀಳಗಿ ಶಾಸಕ ಮುರುಗೇಶ ನಿರಾಣಿ ಹೇಳಿದರು.
ಬಾದಾಮಿ ಶುಗರ್ಸ್, ಕೇದಾರನಾಥ ಶುಗರ್ಸ್ ಹಾಗೂ ಪಾಂಡವಪುರ ಸಕ್ಕರೆ ಕಾರ್ಖಾನೆ ಖರೀದಿ ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡುವ ಜತೆಗೆ ಯುವಕರಿಗೆ ಉದ್ಯೋಗ ಸೃಷ್ಟಿಸಿ ರೈತರಿಗೆ ಅನುಕೂಲ ಕಲ್ಪಿಸುತ್ತಿರುವುದಕ್ಕೆ ಬಾದಾಮಿ ಪಂಚಮಸಾಲಿ ಮುಖಂಡರು ಹಾಗೂ ಕಿತ್ತೂರು ಚನ್ನಮ್ಮ ವಿದ್ಯಾ ಸಂಸ್ಥೆ ಪದಾಧಿಕಾರಿಗಳು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಬಾದಾಮಿಯಲ್ಲಿರುವ ಬಾದಾಮಿ ಶುಗರ್ಸ್, ಕೆರಕಲಮಟ್ಟಿಯಲ್ಲಿರುವ ಕೇದಾರನಾಥ ಶುಗರ್ಸ್ ಹಾಗೂ ಮಂಡ್ಯ ಜಿಲ್ಲೆ ಪಾಂಡವಪುರ ಸಕ್ಕರೆ ಕಾರ್ಖಾನೆ ಖರೀದಿಸಿದ್ದು ಇದರಿಂದ ಈ ಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಕುಳಗೇರಿಯ ಎಂಆರ್ಎನ್ ಶುಗರ್ಸ್, ಸಾಯಿ ಪ್ರಿಯಾ ಶುಗರ್ಸ್, ಕಲ್ಲಾಪುರ ಎಂಆರ್ಎನ್ ಶುಗರ್ಸ್, ರತ್ನಾ ಸಿಮೆಂಟ್ ಕಾರ್ಖಾನೆಯಗಳಲ್ಲಿ ಸಾವಿರಾರು ಯುವಕರಿಗೆ ಉದ್ಯೋಗ ನೀಡಲಾಗಿದೆ ಎಂದು ಹೇಳಿದರು.
ಹಿರಿಯರಾದ ಬಿ.ಬಿ. ಢಾಣಕ, ರಾಚಪ್ಪ ಹಾದಿಮನಿ, ಎಂ.ಡಿ. ಎಲಿಗಾರ, ಶಿವಮೂರ್ತೆಪ್ಪ ಹುಂಬಿ, ಬಸವರಾಜ ಧೂಳಪ್ಪನವರ, ರಮೇಶ ಹಾದಿಮನಿ, ಡಾ. ಶಿವುಕುಮಾರ ಗಂಗಾಲ, ಬಸವರಾಜ ಅಮರಗೋಳ, ಬಸವರಾಜ ಉಳ್ಳಾಗಡ್ಡಿ ಇದ್ದರು.
ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಉದ್ದಿಮೆಗಳು ಸ್ಥಾಪನೆಯಾಗಬೇಕು. ಆಗ ಮಾತ್ರವೇ ಈ ಭಾಗದ ಜನರು ಬೇರೆ ಬೇರೆ ಪಟ್ಟಣಗಳಿಗೆ ದುಡಿಯಲು ಗುಳೆ ಹೋಗುವುದು ತಪ್ಪುತ್ತದೆ.
– ಮುರುಗೇಶ ನಿರಾಣಿ ಬೀಳಗಿ ಶಾಸಕ