ಬಾದಾಮಿ: ಕಲೆ ಮೂಲಕ ಆನಂದ ಪಡೆಯುವ ಜತೆಗೆ ಪರಿಸರ ಕಾಳಜಿ, ಪ್ರಕೃತಿಯ ಸುಂದರತೆ, ವೈವಿಧ್ಯತೆಯ ವಿಷಯಗಳು ಹಾಗೂ ಕಲಾವಿದನ ಸೃಜನಶೀಲತೆಯನ್ನು ತಿಳಿಯಬಹುದಾಗಿದೆ. ಚಿತ್ರಕಲೆಯಲ್ಲಿ ಆಧುನಿಕತೆಗೆ ತಕ್ಕಂತೆ ಇನ್ನೂ ಸೃಜನಶೀಲತೆ ಹೆಚ್ಚಾಗುವ ಅವಶ್ಯಕತೆ ಇದೆ ಎಂದು ಕಲಾ ಸಂಶೋಧಕ ಡಾ.ಆನಂದ ಪೂಜಾರ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಾದಾಮಿ ಸಮೀಪದ ಬನಶಂಕರಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಕೇಂದ್ರದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ.ಸಂತೋಷಕುಮಾರ ನಾಗರಾಳ ಅವರ ಮೂರು ದಿನಗಳ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಹಿರಿಯ ಚಿತ್ರಕಲಾವಿದ ಎಂ.ಐ. ಬಾರಾವಲಿ ಮಾತನಾಡಿ, ಬಾದಾಮಿ ಪರಿಸರ ಕಲಾವಿದರಿಗೆ ಅತ್ಯಂತ ಉಪಯುಕ್ತವಾಗಿದೆ. ಮುಂಬೈನ ಜೆ.ಜೆ. ಕಲಾ ಶಾಲೆಯ ವಿದ್ಯಾರ್ಥಿಗಳು ಇಲ್ಲಿಗೆ ಪ್ರತಿವರ್ಷ ಬಂದು ಈ ಪರಿಸರ ಚಿತ್ರಿಸಿ ಅಭ್ಯಾಸ ಮಾಡುತ್ತಾರೆ. ಈಗಲೂ ದೂರದ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಪಶ್ಚಿಮ ಬಂಗಾಳದ ಕಲಾವಿದರು ಇಲ್ಲಿಗೆ ಅಭ್ಯಾಸಕ್ಕಾಗಿ ಬರುತ್ತಾರೆ ಎಂದು ಹೇಳಿದರು.
ಹಂಪಿ ವಿವಿ ಬನಶಂಕರಿ ಕೇಂದ್ರದ ಆಡಳಿತಾಧಿಕಾರಿ ಡಾ.ಕೆ.ಎಚ್. ಕಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾದಾಮಿಯಂಥ ಐತಿಹಾಸಿಕ ನಗರಲ್ಲಿ ಕಲಾವಿದರು ರಚನೆ ಮಾಡಿದ ಕಲಾಕೃತಿ ಪ್ರದರ್ಶನ ಮತ್ತು ಮಾರಾಟಕ್ಕೆ ಸೂಕ್ತ ವೇದಿಕೆಯ ಅವಶ್ಯಕತೆ ಇದೆ ಎಂದು ಹೇಳಿದರು.
ಕಲಾವಿದ ಡಾ.ಸಂತೋಷಕುಮಾರ ನಾಗರಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾದಾಮಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಕಲಾವಿದರಾದ ಶಿವಾನಂದ ಬಡಿಗೇರ, ಬಶೀರ ವಾಚಮೇಕರ, ದಿನೇಶ ಮರಿಗೌಡರ ಹಾಗೂ ಕೇಂದ್ರದ ಅಧ್ಯಾಪಕರು, ವಿದ್ಯಾರ್ಥಿಗಳು, ಕಲಾಸಕ್ತರು, ಸಾರ್ವಜನಿಕರು ಭಾಗಿಯಾಗಿದ್ದರು. ಅಧ್ಯಾಪಕ ಡಾ.ಎನ್.ಎಂ. ಅಂಗಡಿ ಕಾರ್ಯಕ್ರಮ ನಿರೂಪಿಸಿದರು.