ಬಾದಾಮಿ: ಕರೊನಾ ವೈರಸ್ ತಡೆಗಟ್ಟುವಲ್ಲಿ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದು, ಜಿಲ್ಲೆಯ ಗಡಿ ಭಾಗ ಕುಳಗೇರಿ ಕ್ರಾಸ್ ಗ್ರಾಮದ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಸ್ಥಾಪಿಸಿರುವ ಚೆಕ್ಪೋಸ್ಟ್ನಲ್ಲಿ ಬುಧವಾರವೂ ವಾಹನದಲ್ಲಿ ಪ್ರಯಾಣಿಸುವ ಜನರ ತಪಾಸಣೆ ನಡೆಯಸಲಾಯಿತು.
ಹೊರ ಜಿಲ್ಲೆಗಳಿಂದ ಪ್ರಯಾಣಿಸುವ ಪ್ರಯಾಣಿಕರ ಮೇಲೆ ನಿಗಾ ವಹಿಸಿದ್ದು, ಆರೋಗ್ಯ, ಪೊಲೀಸ್, ಕಂದಾಯ ಇಲಾಖೆ ಸಿಬ್ಬಂದಿ ಪ್ರತಿ ವಾಹನಗಳನ್ನು ನಿಲ್ಲಿಸಿ ಪರೀಕ್ಷೆ ಮಾಡುತ್ತಿದ್ದಾರೆ.
ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ವೈ.ಜೆ. ಮನಿಯಾರ, ಚೆಕ್ಪೋಸ್ಟ್ ಪ್ರಾರಂಭಿಸಿದ ದಿನದಿಂದ 80ಕ್ಕೂ ಹೆಚ್ಚು ವಾಹನಗಳಲ್ಲಿ 800ಕ್ಕೂ ಹೆಚ್ಚು ಜನರನ್ನು ತಪಾಸಣೆ ಮಾಡಲಾಗಿದೆ. ಪ್ರಯಾಣಿಕರು ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ. ಇಲ್ಲಿಯ ವರೆಗೆ ಯಾರೊಬ್ಬರಿಗೂ ಸೋಂಕು ಇರುವ ಬಗ್ಗೆ ವರದಿಯಾಗಿಲ್ಲ ಎಂದು ತಿಳಿಸಿದರು.
ಬಿಸಿಲಿಗೆ ಬಸವಳಿದ ಸಿಬ್ಬಂದಿ
ಚೆಕ್ ಪೋಸ್ಟ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಬಿಸಿಲಿನ ತಾಪಕ್ಕೆ ಬೇಸತ್ತು ಹೋಗಿದ್ದಾರೆ. ವಾರದಿಂದ ಬಿಸಿಲಿನ ತಾಪ ಹೆಚ್ಚಾಗಿದ್ದು, ಬೆಳಗ್ಗೆಯಿಂದ ಸಂಜೆವರೆಗೂ ಸಿಬ್ಬಂದಿ ವಾಹನ ನಿಲ್ಲಿಸಿ ಜನರ ತಪಾಸಣೆ ಮಾಡುತ್ತಿದ್ದಾರೆ.
ಆರೋಗ್ಯ ಸಿಬ್ಬಂದಿ ಪುಷ್ಪಾ ನಾಗಲೋಟಿಮಠ, ಧರಿಯಪ್ಪ ನಾಯ್ಕರ್, ಮೋಹನ್ ಮುಚ್ಚಳಗುಡ್ಡ, ಅಶೋಕ ತಿಮ್ಮಾಪುರ, ಸಂಜೀವ್, ಪೊಲೀಸ್ ಪೇದೆ ಎಸ್.ಜಿ. ಸೊನ್ನದ ಸೇರಿ ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.