ವಿಜಯಪುರ : ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಸೆ. 17 ರಂದು ಬೃಹತ್ ರಕ್ತದಾನ ಶಿಬಿರ, ಟಿಬಿ ಮುಕ್ತ ಅಭಿಯಾನ ಸೇರಿದಂತೆ ವಿವಿಧ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ ಹೂಗಾರ ಹೇಳಿದರು.
ಕೇಂದ್ರ ಸರ್ಕಾರ ದೇಶದಲ್ಲಿ ಪ್ರಧಾನಿ ಮೋದಿ ಅವರ ಬಲಿಷ್ಠ ನಾಯಕತ್ವದಲ್ಲಿ ಅನೇಕ ಜನಪರ ಆಡಳಿತ ನೀಡುತ್ತಿದೆ. ಬಡ ಜನರ ಕಲ್ಯಾಣಕ್ಕಾಗಿ ಸರ್ಕಾರ ನೀತಿ ನಿರೂಪಣೆಗಳನ್ನು ಜಾರಿಗೆ ತರುತ್ತಿದೆ. ಪ್ರಧಾನಮಂತ್ರಿಗಳ ಆರೋಗ್ಯ ಮತ್ತು ಸುದೀರ್ಘ ಜೀವನಕ್ಕಾಗಿ ಜಿಲ್ಲಾ ಯುವ ಮೋರ್ಚಾ ಹಾಗೂ ಸಮಸ್ತ ಬಿಜೆಪಿ ಕಾರ್ಯಕರ್ತರು ಪ್ರಾರ್ಥಿಸುತ್ತೇವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೆ. 17 ರಿಂದ ಅ. 2 ರ ವರೆಗೆ ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ವಿವಿಧ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದ್ದು, ಸೆ. 25 ರಂದು ದೀನ್ ದಯಾಳ್ ಉಪಾಧ್ಯಾಯ ಜಯಂತಿ ಅಂಗವಾಗಿ ಜಿಲ್ಲೆಯ 9 ಮಂಡಲಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿ ವಾರ್ಡ್ಗಳಲ್ಲಿ ಕನಿಷ್ಟ 20 ಸಸಿಗಳನ್ನು ನೆಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಪ್ರತಿ ವಾರ್ಡನಿಂದ ಕನಿಷ್ಟ 20 ಜನರಿಂದ ರಕ್ತದಾನ ಮಾಡಿಸಲಾಗುವುದು. ಟಿಬಿ ಮುಕ್ತ ಅಭಿಯಾನದ ಅಂಗವಾಗಿ ಪ್ರತಿ ಯುವಮೋರ್ಚಾ ಕಾರ್ಯಕರ್ತರು ಒಬ್ಬ ರೋಗಿಯನ್ನು ಒಂದು ವರ್ಷಗಳ ಕಾಲ ದತ್ತು ತೆಗೆದುಕೊಳ್ಳಲಾಗುವುದು. ರಕ್ತದಾನಕ್ಕೆ ಆನ್ಲೈನ್ ಮೂಲಕ ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದರು.
ಯುವ ಮೋರ್ಚಾ ರಾಜ್ಯ ಕಾರ್ಯಕಾರಿ ಸದಸ್ಯ ವಿಠ್ಠಲ ಯತ್ನಟ್ಟಿ, ರಾಜ್ಯ ಉಪಾಧ್ಯಕ್ಷ ರಾಜಕುಮಾರ ಸಗಾಯಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂತು ಶಿಂಧೆ, ಅಶೋಕ ರಾಠೋಡ, ರಾಜೇಶ ತಾವಸೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರುದ್ರ ಬಾಗಲಕೋಟ, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜೋಶಿ, ಜಿಲ್ಲಾ ಉಪಾಧ್ಯಕ್ಷ ಶ್ರೀಧರ ಬಿಜ್ಜರಗಿ, ಆರ್.ಎಚ್.ಚವ್ಹಾಣ, ಯುವ ಮೋರ್ಚಾ ಜಿಲ್ಲಾ ಖಜಾಂಚಿ ಪರಶುರಾಮ ಹೊಸಪೇಟ ಉಪಸ್ಥಿತರಿದ್ದರು.