ಲಖನೌ: ಕಸ್ಟಡಿಯಲ್ಲಿ ನನ್ನನ್ನು ಉಗ್ರರಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರು ಹಾಗೂ ಸರ್ಕಾರದ ವಿರುದ್ಧ ರಾಂಪುರ ಕ್ಷೇತ್ರದ ಸಂಸದ ಹಾಗೂ ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂ ಖಾನ್ ಆರೋಪಿಸಿದರು.
ಅಂದಹಾಗೆ ಅಜಂ ಖಾನ್ರನ್ನು ಫೋರ್ಜರಿ ಪ್ರಕರಣದ ವಿಚಾರಣೆಗಾಗಿ ಸೀತಾಪುರ್ ಜೈಲಿನಿಂದ ರಾಂಪುರಕ್ಕೆ ಇಂದು ಕರೆದೊಯ್ಯಲಾಯಿತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪೊಲೀಸರು ನನ್ನನ್ನು ಉಗ್ರರಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಕಳೆದ ಬುಧವಾರವಷ್ಟೇ ಪೋರ್ಜರಿ ಪ್ರಕರಣದಲ್ಲಿ ಅಜಂ ಖಾನ್, ಪತ್ನಿ ತಝೀನ್ ಫಾತಿಮಾ ಮತ್ತು ಮಗ ಅಬ್ದುಲ್ಲಾ ಅಜಂ ಅವರಾಗಿಯೇ ನ್ಯಾಯಾಲಯದ ಮುಂದೆ ಶರಣಾಗಿದ್ದರು. ಬಳಿಕ ಅವರನ್ನು ಮಾರ್ಚ್ 2ರವರೆಗೆ ಏಳು ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು.
ತಮ್ಮ ಮಗ ಅಬ್ದುಲ್ಲಾ ಅಜಂರ ಜನನ ಪ್ರಮಾಣ ಪತ್ರವನ್ನು ಫೋರ್ಜರಿ ಮಾಡಿದ ಆರೋಪ ಅಜಂ ಖಾನ್ ಕುಟುಂಬದ ಮೇಲಿದೆ. ಹೀಗಾಗಿ ಮೊಹಮ್ಮದ್ ಅಬ್ದುಲ್ಲಾ ಅಜಂ ಖಾನ್ ವಿಧಾನಸಭಾ ಸದಸ್ಯತ್ವವನ್ನು ಉತ್ತರ ಪ್ರದೇಶ ವಿಧಾನಸಭೆ ರದ್ದುಪಡಿಸಿತ್ತು. ಅಲ್ಲದೆ, ಅಬ್ದುಲ್ಲಾ ಪ್ರತಿನಿಧಿಸುವ ಸೌರಾ ಕ್ಷೇತ್ರ ಖಾಲಿಯಾಗಿದೆ ಎಂದು ಗುರುವಾರ ಘೋಷಿಸಿತ್ತು.
ಅಜಂ ಖಾನ್ ವಿರುದ್ಧ ಸುಮಾರು 80ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಅಕ್ರಮ ಭೂ ಒತ್ತುವಾರಿ ಪ್ರಕರಣವೇ ಹೆಚ್ಚು. (ಏಜೆನ್ಸೀಸ್)