ನವದೆಹಲಿ: ಕೋವಿಡ್-19 ವಿರುದ್ಧ ಅನೇಕರು ತಮ್ಮದೇ ಆದ ರೀತಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ವಿಜ್ಞಾನಿಗಳು, ವಿವಿಧ ಔಷಧ ಕಂಪನಿಗಳು ಲಸಿಕೆ ಸಂಶೋಧನೆಯಲ್ಲಿ ತೊಡಗಿದ್ದರೆ ಮತ್ತೊಂದೆಡೆ ದೊಡ್ಡದೊಂದು ಗುಂಪು ಜನಾಂದೋಲನ ನಡೆಸಿದೆ.
ಆಯುಷ್ ಇಲಾಖೆಯ ಅಂದರೆ ಆಯುರ್ವೇದ, ಯೋಗ, ಯುನಾನಿ, ಸಿದ್ಧ ಹಾಗೂ ಹೋಮಿಯೋಪಥಿ ಪದ್ಧತಿಯ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ದೊಡ್ಡ ಮಟ್ಟದಲ್ಲಿ ಕೋವಿಡ್-19 ವಿರುದ್ಧ ಜನಾಂದೋಲನ ನಡೆಸಿದ್ದು, ಈ ಪದ್ಧತಿಯ ಔಷಧ/ಚಿಕಿತ್ಸೆಯತ್ತ ಜನರು ಆಕರ್ಷಿತರಾಗುವಂತೆ ಮಾಡಿದೆ.
ಆಯುಷ್ ಕ್ಲಿನಿಕ್, ಆಸ್ಪತ್ರೆ, ಶಿಕ್ಷಣ ಸಂಸ್ಥೆ, ವೆಲ್ನೆಸ್ ಸೆಂಟರ್ ಹಾಗೂ ಇತರ ಕೇಂದ್ರಗಳು ಇದರಲ್ಲಿ ಭಾಗವಹಿಸಿದ್ದರಿಂದ ಜನಸಾಮಾನ್ಯರಲ್ಲಿ ದೊಡ್ಡಮಟ್ಟದಲ್ಲೇ ಜಾಗೃತಿ ಉಂಟಾಗಿದ್ದು, ಆಯುಷ್ ಕುರಿತು ಪ್ರಭಾವ ಬೀರಿದೆ. ಅ. 26-30ರ ಐದು ದಿನಗಳಲ್ಲಿ ಡಿಜಿಟಲ್ ಮೀಡಿಯಾ ಮೂಲಕ ಆಯುಷ್ 110 ಲಕ್ಷ ಮಂದಿಯನ್ನು ಮುಖಾಮುಖಿ ತಲುಪಿದೆ ಎಂದು ಆಯುಷ್ ಇಲಾಖೆ ತಿಳಿಸಿದೆ. ದೇಶಾದ್ಯಂತ ವಿವಿಧೆಡೆ 5ರಿಂದ 8 ಸಾವಿರ ಬ್ಯಾನರ್ಸ್, 200 ವೃತ್ತಪತ್ರಿಕೆಗಳಲ್ಲಿ ಲೇಖನ, 300 ಜಾಹೀರಾತುಗಳಲ್ಲದೆ 3 ಲಕ್ಷ ಪಾಂಫ್ಲೆಟ್ಸ್ ಮೂಲಕವೂ ಜಾಗೃತಿ ನಡೆಸಲಾಗಿದೆ. 750 ಆಯುಷ್ ಮೆಡಿಕಲ್ ಕಾಲೇಜುಗಳು ಹಾಗೂ ಅವುಗಳ ವಿದ್ಯಾರ್ಥಿ ಮತ್ತು ಬೋಧಕ-ಬೋಧಕೇತರ ವರ್ಗ ಇದರಲ್ಲಿ ಪಾಲ್ಗೊಂಡಿದ್ದವು.
ಮುಂದಿನ ಹಬ್ಬದ ಸಂದರ್ಭದಲ್ಲಿ ಕೋವಿಡ್-19 ವ್ಯಾಪಿಸುವ ಸಾಧ್ಯತೆ ಹೆಚ್ಚಿರುವುದರಿಂದ, ಹಬ್ಬದಂತೆ ತಡೆಯುವುದು ಸವಾಲಾಗಿರುವುದರಿಂದ ಇಂಥದ್ದೊಂದು ಜನಾಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಇಲಾಖೆ ಹೇಳಿಕೊಂಡಿದೆ.
(ಏಜೆನ್ಸೀಸ್)