ಉಡುಪಿ: ಸೋದೆ ಮಠದ ಪ್ರಸಿದ್ಧ ಯತಿ ಶ್ರೀ ವಾದಿರಾಜರು ಕಾರ್ತಿಕ ಮಾಸದಲ್ಲಿ ತುಳಸಿ ಆರಾಧನೆಯ ಹೊತ್ತಲ್ಲಿ ಅತ್ಯಂತ ಸುಲಭ ರೀತಿಯಲ್ಲಿ ಭಗವಂತನನ್ನು ಭಜಿಸಲು ರಚಿಸಿದ್ದ ತುಳಸೀ ಸಂಕೀರ್ತನೆ ತುಳುನಾಡಿನ ನೂರಾರು ಮನೆಗಳಲ್ಲಿ, ದೇವಸ್ಥಾನಗಳಲ್ಲಿ ಸಾವಿರಾರು ಮಂದಿ ಭಕ್ತರು ಹಾಡಿ ಕುಣಿಯುವ ಪದ್ಧತಿ ಶತಮಾಮಗಳಿಂದ ಚಾಲ್ತಿಯಲ್ಲಿದೆ. ಈಗ ದೂರದ ಆಯೋಧ್ಯೆ ರಾಮಮಂದಿರದಲ್ಲಿಯೂ ಮಾರ್ದನಿಸುತ್ತಿದೆ.
ಶುಕ್ರವಾರ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರ ನೇತೃತ್ವದಲ್ಲಿ ರಾಮಮಂದಿರದಲ್ಲಿ 48 ದಿನಗಳ ಮಂಡಲೋತ್ಸವದ ಪ್ರಯುಕ್ತ ಸಾಯಂಕಾಲ ಉತ್ಸವ ನಡೆಯುತ್ತಿದ್ದು, ಶನಿವಾರ ಸಾಯಂಕಾಲ ರಾಮಮಂದಿರದ ಅಂಗಣದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ವಸಂತಮಂಟಪದಲ್ಲಿ ಶ್ರೀರಾಮ ದೇವರ ಉತ್ಸವ ಮೂರ್ತಿಯನ್ನಿಟ್ಟು ವಸಂತೋತ್ಸವ ನಡೆಯಿತು. ಈ ವೇಳೆಯಲ್ಲಿ ಶ್ರೀಗಳು ಹಾಗೂ ವಿದ್ಯಾರ್ಥಿಗಳು ತಾಳ ಹಿಡಿದು ಶ್ರೀವಾದಿರಾಜರ ತುಳಸಿ ಸಂಕೀರ್ತನೆಯನ್ನು ಹಾಡಿ ನಲಿದು ತುಲಸಿ ಸಂಕೀರ್ತನೆಯನ್ನು ರಾಮನಂಗಳಕ್ಕೆ ಕೊಂಡೊಯ್ದಿದ್ದಾರೆ.