ಶಿವಮೊಗ್ಗ: ಆತ್ಮರತಿಯಲ್ಲಿ ತೊಡಗಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾನಸಿಕ ಸ್ಥಿತಿ ಸರಿ ಇಲ್ಲ. ಶಿವಮೊಗ್ಗದಲ್ಲಿ ಒಳ್ಳೆಯ ಮಾನಸಿಕ ತಜ್ಞರಿದ್ದಾರೆ. ಯತ್ನಾಳ್ ಶಿವಮೊಗ್ಗಕ್ಕೆ ಬರಲಿ. ಅವರಿಗೆ ಒಳ್ಳೆಯ ಚಿಕಿತ್ಸೆ ಕೊಡಿಸುವುದು ಗೆಳೆಯನಾಗಿ ನನ್ನ ಕರ್ತವ್ಯ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಕುಟುಕಿದ್ದಾರೆ.
ಯತ್ನಾಳ್ ಪದೇಪದೆ ಸಿಎಂ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಬಿಎಸ್ವೈ ಸಮರ್ಥ ನಾಯಕರು. ಅವರ ಬದಲಾವಣೆ ಸಾಧ್ಯವಿಲ್ಲ. ಯತ್ನಾಳ್ ಮಾತಿಗೆ ಯಾವ ಬೆಲೆಯೂ ಇಲ್ಲ. ಪಕ್ಷ ಸದ್ಯದಲ್ಲೇ ಅವರ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
ಅಭದ್ರತೆ ಕಾಡಿದಾಗಲೆಲ್ಲ ಯತ್ನಾಳ್ ಅಸಂಬದ್ಧವಾಗಿ ಮಾತನಾಡುತ್ತಾರೆ. ಕೆಲವರಿಗೆ ತಮ್ಮನ್ನು ತಾವೇ ವೈಭವೀಕರಿಸಿಕೊಳ್ಳುವ ಚಟವಿರುತ್ತದೆ. ಇದನ್ನೇ ಆತ್ಮರತಿ ಎಂದು ಕರೆಯಲಾಗುತ್ತದೆ. ಈ ಮಾನಸಿಕ ಕಾಯಿಲೆಗೆ ವೈದ್ಯರ ಅವಶ್ಯಕತೆ ಖಂಡಿತಾ ಇದೆ ಎಂದು ಆಯನೂರು ಮಂಜುನಾಥ್ ಲೇವಡಿ ಮಾಡಿದರು.
ಬೇರೆ ಪಕ್ಷಗಳಿಗೆ ರಾಜೀನಾಮೆ ನೀಡಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದವರು ಇದ್ದಾರೆ. ಮೊದಲು ಅವರಿಗೆ ಅವಕಾಶ ನೀಡಲಿ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ ಆಯನೂರು ಮಂಜುನಾಥ್, ಒಂದು ವೇಳೆ ಸಚಿವ ಸ್ಥಾನ ನೀಡಿದರೆ ನಿಭಾಯಿಸಲು ಸಮರ್ಥನಿದ್ದೇನೆ. ಕೊಡುವುದಾದರೆ ಉನ್ನತ ಶಿಕ್ಷಣ ಖಾತೆಯನ್ನೇ ಕೊಡಲಿ ಎಂದರು.
ನಾನು ಹಣ ಪಡೆದಿಲ್ಲ, ಆಣೆ ಮಾಡಲು ಧರ್ಮಸ್ಥಳಕ್ಕೆ ಬರುವೆ… ಸಿಎಂ ಸಮ್ಮುಖದಲ್ಲೇ ಮುನಿರತ್ನ ಸವಾಲು