More

    ಹಂಪಿ ಕಮಲ ಮಂಟಪದ ಶ್ರೀಗಂಧ ಮರಕ್ಕೆ ಕೊಡಲಿ ಏಟು

    ರಾತ್ರೋರಾತ್ರಿ ಮರ ಕತ್ತರಿಸಿ ಹೊತ್ತೊಯ್ದ ಖದೀಮರು

    ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯ ಲೋಟಸ್ ಮಹಲ್ ಪ್ರಾಂಗಣದಲ್ಲಿದ್ದ ಬೃಹತ್ ಶ್ರಿಗಂಧ ಮರವನ್ನು ರಾತ್ರೋರಾತ್ರಿ ಕತ್ತರಿಸಿ ಹೊತ್ತೊಯ್ದ ಘಟನೆ ನಡೆದಿದೆ.

    ಶುಕ್ರವಾರ ಸಂಜೆ ನಂತರ ಶ್ರೀಗಂಧ ಮರವನ್ನು ಕತ್ತರಿಸಿ, ಕಳವು ಮಾಡಲಾಗಿದೆ. ಸುಮಾರು ಎರಡು ದಶಕಗಳ ಹಳೆಯದಾಗಿದ್ದ ಶ್ರೀಗಂಧ ಹೆಮ್ಮರವಾಗಿ ಬೆಳೆದು ನಿಂತಿತ್ತು.

    ಯಾರೋ ಶ್ರೀಗಂಧ ಮರವನ್ನು ಕತ್ತರಿಸಿಕೊಂಡು ಹೋಗಿರುವ ಬಗ್ಗೆ ಶನಿವಾರ ಬೆಳಗ್ಗೆ ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿದೆ. ತಕ್ಷಣ ಎಎಸ್‌ಐ ಅಧೀಕ್ಷಕ ಡಾ.ನಿಹಿಲ್ ದಾಸ್ ಹಾಗೂ ಕಮಲಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಕಳೆದ ರಾತ್ರಿ ಕಮಲ ಮಂಟಪದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಸೆಕ್ಯೂರಿಟಿ ಗಾರ್ಡ್ಗಳನ್ನು ಪ್ರಾಥಮಿಕ ವಿಚಾರಣೆಗೆ ಒಳಪಡಿಸಲಾಗಿದೆ. ಕಮಲ ಮಂಟಪದಲ್ಲಿರುವ ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲಿಸಿದ್ದಲ್ಲದೇ, ಅದರ ಹಾರ್ಡ್ ಡಿಸ್ಕ್ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

    ಈ ಕುರಿತು ಪ್ರತಿಕ್ರಿಯಿಸಿದ ಎಎಸ್‌ಐ ಅಧೀಕ್ಷಕ ಡಾ.ನಿಹಿಲ್ ದಾಸ್, ಸಂರಕ್ಷಿತ ಸ್ಮಾರಕ ಕಮಲ ಮಂಟಪದ ಆವರಣದಲ್ಲಿ ಬೆಳೆದಿದ್ದ ಶ್ರೀಗಂಧ ಮರವನ್ನು ಯಾರೋ ಕತ್ತರಿಸಿಕೊಂಡು ಹೋಗಿರುವುದು ಆತಂಕಕಾರಿ ಬೆಳವಣಿಗೆ. ಈ ಕುರಿತು ಪೊಲೀಸರಿಗೆ ದೂರು ನೀಡಲಾಗುವುದು. ಜತೆಗೆ ಕಳೆದ ಐದು ದಿನಗಳಿಂದ ಲೋಟಸ್ ಮಹಲ್ ಭದ್ರತೆಯಲ್ಲಿದ್ದ ಸಿಬ್ಬಂದಿ ವಿವರ ಮತ್ತಿತರೆ ಮಾಹಿತಿಯನ್ನು ಸಂಜೆ ಒಳಗಾಗಿ ಸಲ್ಲಿಸುವಂತೆ ವಲಯ ಸ್ಮಾರಕ ಸಂರಕ್ಷಣಾಧಿಕಾರಿ ಎಂ.ಸಿ.ಸುನಿಲ್‌ಗೆ ನೋಟಿಸ್ ನೀಡಿದ್ದೇನೆ. ಈ ಕೃತ್ಯದಲ್ಲಿ ಭಾಗಿಯಾದವರಿಗೆ ನಿಶ್ಚಿತವಾಗಿ ಶಿಕ್ಷೆಯಾಗುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts