ಸಿರಗುಪ್ಪ: ಕರೊನಾ ಸೋಂಕಿತರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವಿವಿಧ ಇಲಾಖೆಗಳು ಸಮುದಾಯದಲ್ಲಿ ಸೋಂಕಿನ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದರೂ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿಲ್ಲ್ಲವೆಂದು ಆರೋಗ್ಯ ಇಲಾಖೆಯ ಜಿಲ್ಲಾ ಅಂಕಿತ ಅಧಿಕಾರಿ ಡಾ.ಮರಿಯಮ್ಬೀ ಕಳವಳ ವ್ಯಕ್ತಪಡಿಸಿದರು.
ಕರೊನಾ ತಡೆಗಟ್ಟುವ ಹಿನ್ನೆಲೆಯಲ್ಲಿ ನಗರದ ತಾಲೂಕು ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಸೋಂಕಿತ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಅಗತ್ಯವಾದ ಪರಿಕರಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸಬೇಕು. ಕರೊನಾ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸೋಂಕಿತರ ಮಾಹಿತಿಯನ್ನು ಪಡೆಯಲು ಶಿಕ್ಷಣ ಇಲಾಖೆಯ ಶಿಕ್ಷಕರನ್ನು ಬಳಸಿಕೊಳ್ಳಬೇಕು, ಅಗತ್ಯವಾದ ತರಬೇತಿಯನ್ನು ನೀಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಡಿ.ಭಜಂತ್ರಿಗೆ ಸೂಚಿಸಿದರು.
ತಹಸೀಲ್ದಾರ್ ಎಸ್.ಬಿ.ಕೂಡಲಿಗಿ, ಪೌರಾಯುಕ್ತ ಪ್ರೇಮ್ಚಾರ್ಲ್ಸ್, ಸಿಪಿಐ ಆರ್.ಟಿ.ಪವಾರ್, ವೈದ್ಯರಾದ ವಿದ್ಯಾಶ್ರೀ, ಸಿದ್ದಲಿಂಗೇಶ್ವರಿ, ದಿನೇಶ್, ರೋಹಿಣಿ, ಹಿರಿಯ ಆರೋಗ್ಯ ಸಹಾಯಕ ಗಿರೀಶ್ಕುಮಾರ್, ಆಶಾ ಮೆಂಟರ್ ಸುಜಾತ ಇದ್ದರು.