ಅಥಣಿ : ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ಮಹಾಮಾರಿ ಕರೊನಾ ವೈರಸ್ ತನ್ನ ವೇಗ ಹೆಚ್ಚಿಸಿಕೊಂಡಿದೆ. ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕರೊನಾ ಸೋಂಕಿತರು ಪತ್ತೆಯಾಗುತ್ತಿರುವುದರಿಂದ ಎಲ್ಲೆಡೆ ಆತಂಕ ಸೃಷ್ಟಿಯಾಗಿದೆ. ತಾಲೂಕಿನಲ್ಲಿ ಈ ವರೆಗೆ ಕೋವಿಡ್-19ಗೆ ಮೂವರು ಬಲಿಯಾಗಿದ್ದಾರೆ.
ಕರೊನಾ ಸೋಂಕಿನಿಂದ ಇತ್ತೀಚೆಗೆ ಸಂಕೋನಟ್ಟಿ ಗ್ರಾಮದ ಯುವಕ ಟೆಕ್ಕಿ ಮೃತಪಟ್ಟ ಬಳಿಕ ನಂತರ ಅಥಣಿ ಪೊಲೀಸ್ ಠಾಣೆ ಸೀಲ್ಡೌನ್ ಮಾಡಲಾಗಿದೆ. ಬುಧವಾರ ಶಿವನೂರ ಗ್ರಾಮದ ವ್ಯಕ್ತಿಯೊಬ್ಬರು ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಅವರು ಪಟ್ಟಣದ ಸಾಯಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಈಗ ಆ ಪ್ರದೇಶದ 100 ಮೀಟರ್ ಸೀಲ್ಡೌನ್ ಆಗಿದೆ. ಪಟ್ಟಣದ ಶಾಂತಿನಗರದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಅವರ ಮನೆಯವರನ್ನು ಕ್ವಾರಂಟೈನ್ನಲ್ಲಿ ಇಡಲಾಗಿದೆ.
ಶಾಂತಿನಗರ 100 ಮೀಟರ್ ಸೀಲ್ಡೌನ್ ಮಾಡಲಾಗಿದೆ. ಗುರುವಾರ ಪಟ್ಟಣದ ಕಣಕ ನಗರದ ಓರ್ವ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದು, ಇವರಿಗೂ ಕರೊನಾ ದೃಢಪಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ. ದಿನದಿಂದ ದಿನಕ್ಕೆ ಕರೊನಾ ಹಾವಳಿ ತಾಲೂಕಿನೆಲ್ಲೆಡೆ ಹೆಚ್ಚುತ್ತಿರುವುದರಿಂದ ಯಾವಾಗ ಯಾರನ್ನು ಬಲಿ ಪಡೆಯಲಿದೆ ಎಂಬ ಭಯ ಜನರಲ್ಲಿ ಶುರುವಾಗಿದೆ. ಆದ್ದರಿಂದ ಜನರು ಕೋವಿಡ್-19 ಬರದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ. ದೈಹಿಕ ಅಂತರ ಹಾಗೂ ಹೊರಗೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಬರಬೇಕು. ಸ್ಯಾನಿಟೈಸರ್ ಬಳಕೆ ಮಾಡಬೇಕು. ಎಲ್ಲರೂ ಕರೊನಾ ಗಂಭೀರತೆ ಅರಿತು ನಡೆದರೆ ಮಾತ್ರ ಇದಕ್ಕೆ ಕಡಿವಾಣ ಹಾಕಲು ಸಾಧ್ಯವಿದೆ.