ನವದೆಹಲಿ: ಸದಾ ಕಾಲು ಕೆರೆದು ಜಗಳ ಮಾಡುವ ಚೀನಾಕ್ಕೆ ಪಾಠ ಕಲಿಸಲು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಒಮ್ಮೆ ಭಾರತದಲ್ಲಿನ ಚೀನಾ ರಾಯಭಾರ ಕಚೇರಿಗೆ 800 ಕುರಿಗಳನ್ನು ನುಗ್ಗಿಸಿ ಪ್ರತಿಭಟಿಸಿದ್ದರು ಎಂಬ ಸಂಗತಿ ಇದೀಗ ಬೆಳಕಿಗೆ ಬಂದಿದೆ.
ಅದು 1965. 42 ವರ್ಷದ ಅಟಲ್ ಬಿಹಾರಿ ವಾಜಪೇಯಿ ಜನಸಂಘದಿಂದ ಸಂಸತ್ಗೆ ಆಯ್ಕೆಯಾಗಿದ್ದರು. ಪಾಕಿಸ್ತಾನದ ನುಸುಳುಕೋರರ ಸಮಸ್ಯೆ ತಾರಕದಲ್ಲಿದ್ದ ಸಂದರ್ಭವದು. ಇದನ್ನು ತಡೆಗಟ್ಟಲು ಭಾರತ ಸರ್ಕಾರ ಹರಸಾಹಸ ಮಾಡುತ್ತಿತ್ತು. ಈ ಸಂದರ್ಭವನ್ನು ಬಳಸಿಕೊಂಡು ಕಾಲು ಕೆರೆದುಕೊಂಡು ಭಾರತದ ಮೇಲೆ ಮುಗಿಬಿದ್ದು, ಆಗ ಮಹಾರಾಜರ ಆಡಳಿತಕ್ಕೆ ಒಳಪಟ್ಟಿದ್ದ ಸಿಕ್ಕಿಂ ರಾಜ್ಯವನ್ನು ತನ್ನದಾಗಿಸಿಕೊಳ್ಳಲು ಚೀನಾ ಹುನ್ನಾರ ನಡೆಸಿತ್ತು.
ಭಾರತದ ಮೇಲೆ ದಂಡೆತ್ತಿ ಬಂದು ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳಲು ನಿರ್ಧರಿಸಿದ್ದ ಚೀನಾ 1965ರ ಆಗಸ್ಟ್-ಸೆಪ್ಟೆಂಬರ್ನಲ್ಲಿ ಆಗಿನ ಪ್ರಧಾನಿ ಲಾಲ್ಬಹಾದ್ದೂರ್ ಶಾಸ್ತ್ರಿ ಅವರಿಗೆ ಪತ್ರವೊಂದನ್ನು ಬರೆದಿತ್ತು. ಗಡಿ ಭದ್ರತೆಯಲ್ಲಿ ತೊಡಗಿದ್ದ ಭಾರತದ ಯೋಧರು ನಮ್ಮ 800 ಕುರಿಗಳು ಮತ್ತು 59 ಯಾಕ್ಗಳನ್ನು ಕದ್ದಿದ್ದಾರೆ. ತಕ್ಷಣವೇ ಅವನ್ನು ಹಿಂದಿರುಗಿಸಬೇಕು. ಇಲ್ಲವಾದಲ್ಲಿ 1962ರಲ್ಲಿ ಮಾಡಿದಂತೆ ಸಮರ ಸಾರಿ ಪಾಠ ಕಲಿಸುವುದಾಗಿ ಬೆದರಿಕೆ ಹಾಕಿತ್ತು.
ಆದರೆ ಈ ಪತ್ರದಿಂದ ಸ್ವಲ್ಪವೂ ವಿಚಲಿತರಾಗದ ಆಗಿನ ಪ್ರಧಾನಿ ಲಾಲ್ಬಹಾದ್ದೂರ್ ಶಾಸ್ತ್ರಿ, ಭಾರತೀಯ ಯೋಧರು ಕುರಿಗಳನ್ನಾಗಲಿ ಅಥವಾ ಯಾಕ್ಗಳನ್ನೇ ಆಗಲಿ ಕದ್ದಿಲ್ಲ. ಇದೊಂದು ಕಪೋಲಕಲ್ಪಿತ ಆರೋಪ ಎಂದು ಸ್ಪಷ್ಟನೆ ನೀಡಿ ಚೀನಾಕ್ಕೆ ಪತ್ರವನ್ನು ರವಾನಿಸಿದ್ದರು.
ಈ ವಿಷಯ ತಿಳಿದ ಅಟಲ್ ಬಿಹಾರಿ ವಾಜಪೇಯಿ, 800 ಕುರಿಗಳ ಮಂದೆಯೊಂದಿಗೆ ನವದೆಹಲಿಯಲ್ಲಿದ್ದ ಚೀನಾ ರಾಯಭಾರ ಕಚೇರಿಗೆ ತೆರಳಿದರು. ಕುರಿಗಳ ಮೇಲೆ, ‘ಬೇಕಾದರೆ ನಮ್ಮನ್ನು ತಿನ್ನಿ, ಆದರೆ ವಿಶ್ವಕ್ಕೆ ತೊಂದರೆಯುಂಟು ಮಾಡಬೇಡಿ’ ಎಂಬ ಭಿತ್ತಿಪತ್ರಗಳನ್ನು ಇರಿಸಿ ತುಂಬಾ ನಾಟಕೀಯವಾಗಿ ಪ್ರತಿಭಟನೆ ನಡೆಸಿದ್ದರು.
ಇದನ್ನೂ ಓದಿ: ಕರೊನಾದ ಮತ್ತೊಂದು ಕರಾಳ ಮುಖ ಬಯಲು: ಬಹುಮುಖ್ಯ ಅಂಗದ ಮೇಲೆ ದಾಳಿ ಮಾಡಲಿದೆ ವೈರಸ್!
ರಾಜತಾಂತ್ರಿಕ ಸಿಬ್ಬಂದಿ ಮೂಲಕ ಈ ವಿಷಯ ತಿಳಿದ ಚೀನಾದ ಅಂದಿನ ಆಡಳಿತಾಧಿಕಾರಿಗಳು ತೀವ್ರ ಮುಜುಗರಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಲಾಲ್ಬಹಾದ್ದೂರ್ ಶಾಸ್ತ್ರಿ ಅವರಿಗೆ ಮತ್ತೊಂದು ಪತ್ರ ಬರೆದಿದ್ದ ಚೀನಾದ ನಾಯಕರು, ಭಾರತ ಸರ್ಕಾರದ ಕುಮ್ಮಕ್ಕಿನಿಂದಲೇ ತಮ್ಮ ವಿರುದ್ಧ ಪ್ರತಿಭಟನೆ ನಡೆಸಿ, ನಮ್ಮನ್ನು ಅವಮಾನಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಇದಕ್ಕೆ ಪ್ರತಿಯಾಗಿ ಮತ್ತೊಂದು ಪತ್ರ ಬರೆದಿದ್ದ ಲಾಲ್ಬಹಾದ್ದೂರ್ ಶಾಸ್ತ್ರಿ ನೇತೃತ್ವದ ಸರ್ಕಾರ, ಈ ಪ್ರತಿಭಟನೆಗೂ, ಭಾರತ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ನೀವು ಮಾಡಿರುವ ಸುಳ್ಳು ಆರೋಪ ಮತ್ತು ಕ್ಷುಲ್ಲಕ ಕಾರಣಕ್ಕೆ ದಾಳಿ ಮಾಡುವ ಬೆದರಿಕೆಗೆ ದೆಹಲಿ ನಾಗರಿಕರು ಸ್ಪಂದಿಸಿ ಮಾಡಿರುವ ಶಾಂತಿಯುತವಾಗಿ ಹಾಗೂ ತುಂಬಾ ಹಾಸ್ಯಮಯವಾಗಿ ನಡೆಸಿದ ಪ್ರತಿಭಟನೆ ಇದಾಗಿದೆ ಎಂದು ಹೇಳಿತ್ತು.
ಆದರೂ ಈ ಕಾರಣವೂ ಸೇರಿ ಹಲವು ಮಿಥ್ಯಾರೋಪಗಳೊಂದಿಗೆ ಭಾರತದ ಮೇಲೆ 1967ರಲ್ಲಿ ಚೀನಾ ದಾಳಿ ಮಾಡಿತ್ತು. ಆದರೆ, ಈ ಬಾರಿ ಭಾರತ ಸಕಲ ರೀತಿಯಲ್ಲೂ ಸಜ್ಜಾಗಿದ್ದರಿಂದ, ಸೋತು ಸುಣ್ಣವಾದ ಚೀನಿಯರು ಅಂಡು ಸುಟ್ಟ ಬೆಕ್ಕಿನಂತೆ ಓಡಿ ಹೋಗಿದ್ದರು.
ಗಂಡ ಹಾಗೂ ಮೂರು ಹೆಂಡತಿಯರ ಕೊಲೆ: ಸುಪಾರಿ ಹಂತಕಿಯ ರಹಸ್ಯ ಬಯಲು!