ಹೈದರಾಬಾದ್: ಸುಮನ್ನೇ ನೀವು ನನ್ನ ಬಗ್ಗೆ ಮಾತನಾಡುವ ಬದಲು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ವಯನಾಡ್ ಬದಲು ಹೈದರಾಬಾದಿನಲ್ಲಿ ನನ್ನ ವಿರುದ್ಧ ಸ್ಪರ್ಧಿಸಿ ಗೆದ್ದು ತೋರಿಸಿ ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸವಾಲೆಸೆದಿದ್ದಾರೆ.
ಹೈದಾರಾಬಾದಿನಲ್ಲಿ ಪಕ್ಷದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಓವೈಸಿ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಬಾಬ್ರಿ ಮಸೀದಿಯ ವಿಚಾರವನ್ನು ಸಹ ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದಾರೆ.
ಇದನ್ನೂ ಓದಿ: ನಿಂತಿದ್ದ ಲಾರಿಗೆ ಬಸ್ ಡಿಕ್ಕಿ; ಮೋದಿ ಸಮಾವೇಶಕ್ಕೆ ತೆರಳುತ್ತಿದ್ದ 39ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರಿಗೆ ಗಂಭೀರ ಗಾಯ
ನಾನು ರಾಹುಲ್ ಗಾಂಧಿಗೆ ನೇರ ಸವಾಲು ಹಾಕುತ್ತಿದ್ದೇನೆ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ನೀವು ವಯನಾಡಿನ ಬದಲು ಹೈದರಾಬಾದಿನಲ್ಲಿ ನನ್ನ ವಿರುದ್ಧ ಸ್ಪರ್ಧಿಸಿ. ನೀವು ದೊಡ್ಡ ದೊಡ್ಡ ಮಾತುಗಳನ್ನು ಆಡುವ ಬದಲು ಚುನಾವಣಾ ಆಖಾಡದಲ್ಲಿ ನನ್ನನ್ನು ಎದುರಿಸಿ. ನಿಮ್ಮ ಸವಾಲುಗಳನ್ನು ಸ್ವೀಕರಿಸಲು ನಾನು ಸಿದ್ದನಿದ್ದೇನೆ. ಕಾಂಗ್ರೆಸ್ ಆಡಳಿತಾವಧಿಯಲ್ಲೇ ಅಯೋಧ್ಯೆಯಲ್ಲಿ ಬಾಬ್ರಿ ಹಾಗೂ ಸೆಕ್ರಟೆರಿಯೇಟ್ ಮಸೀದಿಯನ್ನು ಹೊಡೆದು ಹಾಕಲಾಗಿತ್ತು ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಸೆಪ್ಟೆಂಬರ್ 17ರಂದು ತೆಲಂಗಾಣದ ಟುಕ್ಕುಗುಡ್ಡದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ರಾಹುಲ್ ಗಾಂಧಿ ಬಿಆರ್ಎಸ್, ಬಿಜೆಪಿ ಹಾಗೂ ಎಐಎಂಎಐಎಂ ಪಕ್ಷಗಳು ಒಂದೇ ಗೂಡಿನ ಹಕ್ಕಿಗಳೆಂದು ಆರೋಪಿಸಿದ್ದರು. ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ವಿರುದ್ಧ ಇದುವರೆಗೂ ಯಾವುದೇ ಇಡಿ ಹಾಗೂ ಐಟಿ ಪ್ರಕರಣ ದಾಖಲಾಗಿಲ್ಲ. ಯಾಕೆಂದರೆ ಅವರು ಪ್ರಧಾನಿ ಮೋದಿಗೆ ಅತ್ಯಾಪ್ತರು ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.