ಬೀದಿನಾಟಕ ವಿಭಾಗದಲ್ಲಿ ಮೊಳಕಾಲ್ಮುರು ತಾಲೂಕಿನ ಚಿಕ್ಕೋಬನಹಳ್ಳಿಯ ಕೀರ್ತಿ ಶಿಕ್ಷಣ ಮತ್ತು ಸಾಮಾಜಿಕ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಅಕ್ಷರ ಗ್ರಾಮೀಣ ವಿಕಾಸ್ ಸಂಸ್ಥೆ, ಚಳ್ಳಕೆರೆಯ ಮಲ್ಲೂರಹಳ್ಳಿಯ ಕಲಾನಿಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಹೊಸದುರ್ಗದ ಗೂಳಿಹಟ್ಟಿ ದೊಡ್ಡಗಟ್ಟದ ನೇಸರ ಸಾಂಸ್ಕೃತಿಕ ಮತ್ತು ಶಿಕ್ಷಣಾಭಿವೃದ್ಧಿ ಸಂಸ್ಥೆ, ಹಿರಿಯೂರಿನ ಕೃಷ್ಣಾಪುರದ ಪಾಲನ ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಹೊಸದುರ್ಗದ ಸರ್ವ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಚಿತ್ರದುರ್ಗದ ಆಯಿತೋಳು ಗ್ರಾಮದ ಮಾರುತಿ ಸಾಂಸ್ಕೃತಿಕ ಕಲಾ ಸಂಘದ ಕಲಾವಿದರು ಭಾಗವಹಿಸಿದ್ದರು. ಅದೇ ರೀತಿ ಜನಪದ ವಿಭಾಗದಲ್ಲಿ ನಾಯಕನಹಟ್ಟಿಯ ಕಲಾನಿಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಮಾರುತಿ ಸಾಂಸ್ಕೃತಿಕ ಕಲಾ ತಂಡ, ಸರ್ವ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಕಲಾವಿದರು ಭಾಗಿಯಾಗಿ ಶಕ್ತಿಮೀರಿ ತಮ್ಮ ಕಲಾ ಪ್ರತಿಭಾ ಪ್ರದರ್ಶನ ನೀಡಿದರು.
ಆಯ್ಕೆ ಸಮಿತಿ ಸದಸ್ಯ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಮಾತನಾಡಿ, ಸರ್ಕಾರದ ಜನಪರ ಯೋಜನೆ, ಧ್ಯೇಯೋದ್ದೇಶಗಳ ಕುರಿತು ಗ್ರಾಮೀಣ ಭಾಗದ ಜನರಿಗೆ ಮಾಹಿತಿ ಕೊರತೆ ಇದೆ. ಹೀಗಾಗಿ ಅವರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಆಯ್ಕೆ ಪ್ರಕ್ರಿಯೆ ಹಮ್ಮಿಕೊಳ್ಳಲಾಗಿದೆ. ಇದು ಏಕಪಕ್ಷೀಯವಾಗಿ ಇರದೆ, ಪಾರದರ್ಶಕವಾಗಿ ನಡೆಸಲಾಗುತ್ತಿದೆ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನಡೆದ ಈ ಪ್ರಕ್ರಿಯೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ, ಯುವಜನ ಸೇವಾ ಮತ್ತು ಕ್ರೀಡೆ, ಆರೋಗ್ಯ, ಕೃಷಿ ಹಾಗೂ ವಾರ್ತಾ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಸಮಿತಿ ಸದಸ್ಯರು ತೀರ್ಪುಗಾರರಾಗಿ ಆಗಮಿಸಿ ಕಲಾತಂಡಗಳ ಸಮ್ಮುಖದಲ್ಲಿ ಆಯ್ಕೆಗೆ ಮುಂದಾದರು. ವಿವಿಧ ಇಲಾಖೆ ಅಧಿಕಾರಿಗಳಾದ ಎಸ್.ಕೆ.ಮಲ್ಲಿಕಾರ್ಜುನ, ಕೆ.ಆರ್.ಜಯಲಕ್ಷ್ಮಿಬಾಯಿ, ಟಿ.ಕೃಷ್ಣನಾಯ್ಕ್, ಜೆ.ಆರ್.ಗೌರಮ್ಮ, ಆರ್.ರಜನಿಕಾಂತ್ ಇತರರಿದ್ದರು.