ಮೈಸೂರು: ಸಂತ್ರಸ್ತ ಮಹಿಳೆಯ ಕಿಡ್ನ್ಯಾಪ್ ಪ್ರಕರಣದ 2ನೇ ಆರೋಪಿಯಾಗಿರುವ ಸತೀಶ್ಬಾಬುನನ್ನು ಎಫ್ಐಆರ್ ದಾಖಲಾಗುವ ಮುನ್ನವೇ ಎಸ್ಐಟಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಆರೋಪಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಫ್ಐಆರ್ ಆಗುತ್ತದೆ ಎಂದು ಇವರಿಗೆ ಮೊದಲೇ ಕನಸು ಬಿದ್ದಿತ್ತಾ? ರಾತ್ರಿ 9.05ರಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಅದಕ್ಕೂ ಮುನ್ನವೇ ಮಧ್ಯಾಹ್ನ 12 ಗಂಟೆಗೆ ಸತೀಶ್ಬಾಬುನನ್ನು ಕರೆದುಕೊಂಡು ಹೋಗಿದ್ದಾರೆ. ಬೇಕರಿಯೊಂದರ ಸಿಸಿ ಕ್ಯಾಮರಾದಲ್ಲಿ ಇದು ಸೆರೆಯಾಗಿದೆ ಎಂದು ತಿಳಿಸಿದರು.
ಇದು ಗೊತ್ತಾಗುತ್ತಿದ್ದಂತೆ ಬೇಕರಿಯ ಹಾರ್ಡ್ ಡಿಸ್ಕ್ ತೆಗೆದುಕೊಂಡು ಹೋಗಿ ಈಗ ಡಿಲಿಟ್ ಮಾಡಿ ಕೊಟ್ಟಿದ್ದಾರೆ. ಆದರೆ, ಮತ್ತೊಬ್ಬರು ಮೊಬೈಲ್ ವಿಡಿಯೋ ಮಾಡಿ ಅದನ್ನು ಬೇರೊಬ್ಬರಿಗೆ ಕಳುಹಿಸಿದ್ದಾರೆ. ಇಷ್ಟೆಲ್ಲ ಸಾಕ್ಷಿಗಳು ನಮ್ಮ ಬಳಿ ಇವೆ. ಇದನ್ನು ನಮ್ಮ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ. ಇದಕ್ಕಾಗಿ ಮೈಸೂರಿನಿಂದ ಸಬ್ಇನ್ಸ್ಪೆಕ್ಟರ್ ಕಾರಿನಲ್ಲಿ ಹೋಗಿದ್ದರು. ಇವೆಲ್ಲಾ ದಾಖಲೆಗಳೂ ನಮ್ಮ ಬಳಿ ಇದೆ ಎಂದು ಹೇಳಿದರು.
ದೂರು ಕೊಟ್ಟ ಹುಡುಗ ಅಮಾಯಕ. ಆತನ ಬಳಿ ಹಣ ನೀಡಿ ಖಾಲಿ ಪೇಪರ್ನಲ್ಲಿ ಸಹಿ ಪಡೆದಿದ್ದಾರೆ. ದೂರು ಕೊಟ್ಟ ಯುವಕ ಎಲ್ಲಿದ್ದಾನೆ, ಆತ ಎಲ್ಲಿ ಹೋಗಿದ್ದಾನೆ ಎಂದು ಗೊತ್ತಿಲ್ಲ. ಆ ಮಹಿಳೆ ಬಳಿಯೂ ಈವರೆಗೆ 164ಎ ಕಾಯ್ದೆ ಪ್ರಕಾರ ಹೇಳಿಕೆ ಏಕೆ ದಾಖಲಿಸಿಲ್ಲ ಎಂದು ಪ್ರಶ್ನಿಸಿದರು.
ಜೆಡಿಎಸ್ಗೆ ದಕ್ಷಿಣ ಶಿಕ್ಷಕರ ಕ್ಷೇತ್ರ
ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಲಾಗಿದೆ. ಬಿಜೆಪಿ ಈ ಮೊದಲು ಈ.ಸಿ. ನಿಂಗರಾಜ್ಗೌಡರ ಹೆಸರು ಘೋಷಣೆ ಮಾಡಿತ್ತು. ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರ ಸೇರಿ 6 ಕ್ಷೇತ್ರಗಳ ಪೈಕಿ 5 ಬಿಜೆಪಿ, 1 ಜೆಡಿಎಸ್ಗೆ ಹಂಚಿಕೆಯಾಗಿತ್ತು. ಇದೀಗ ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್ಗೆ ಬಿಜೆಪಿ ಬಿಟ್ಟುಕೊಟ್ಟಿದೆ ಎಂದರು.
ಈ ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್ನಲ್ಲಿ ವಿವೇಕಾನಂದ, ಕೆ.ಟಿ.ಶ್ರೀಕಂಠೇಗೌಡ ಇಬ್ಬರೂ ಆಕಾಂಕ್ಷಿಗಳು. ಯಾರು ಅಭ್ಯರ್ಥಿ ಎಂದು ಅಂತಿಮಗೊಳಿಸಿ ನಾಮಪತ್ರವನ್ನು ಸಲ್ಲಿಸಲಾಗುತ್ತದೆ ಎಂದರು.