ನವದೆಹಲಿ: ಅವರು ಭಾರತೀಯ ಸೇನಾಪಡೆಯ ವಿಶೇಷ ಪಡೆಯ ಯೋಧರಾಗಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿನ ಹಲವು ಸೂಕ್ಷ್ಮ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಉಗ್ರರ ವಿರುದ್ಧ ಹೋರಾಡಿದ್ದರು. ಇದಕ್ಕಾಗಿ ಅವರು ಶೌರ್ಯ ಚಕ್ರ ಪದಕದಿಂದ ಅಲಂಕೃತರಾಗಿದ್ದರು. ಆದರೆ, ಕ್ಯಾನ್ಸರ್ಗೆ ತುತ್ತಾದ ಅವರು, ಅದರ ವಿರುದ್ಧದ ಹೋರಾಟದಲ್ಲಿ ಕೈಚೆಲ್ಲಿ ಬೆಂಗಳೂರಿನಲ್ಲಿ ನಿಧನರಾದರು.
ಅವರೇ ಗುರುಗ್ರಾಮದ ಮೂಲದ ನವಜೋತ್ ಸಿಂಗ್ ಬಲ್ (39). ಇವರು 2002ರಲ್ಲಿ ಭಾರತೀಯ ಸೇನಾಪಡೆಗೆ ಸೇರ್ಪಡೆಗೊಂಡಿದ್ದರು. 2 ಪ್ಯಾರಾ ರೆಜಿಮೆಂಟ್ನಲ್ಲಿ ಸ್ಪೆಶಲ್ ಫೋರ್ಸಸ್ ಆಫೀಸರ್ ಆಗಿದ್ದರು. ಆ ಪಡೆಯನ್ನು ಮುನ್ನಡೆಸಿದ ಹೆಗ್ಗಳಿಕೆಯೂ ಇವರದ್ದಾಗಿದೆ. ಜಮ್ಮು ಮತ್ತು ಕಾಶ್ಮೀರದ ಲೊಲಾಬ್ನಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಧೀರೋದಾತ್ತವಾಗಿ ಹೋರಾಡಿದ್ದರು. ಆದ್ದರಿಂದಲೇ ಇವರಿಗೆ ಶಾಂತಿ ಸಮಯದ ಮೂರನೇ ಅತ್ಯುನ್ನತ ಪದಕ ಶೌರ್ಯ ಚಕ್ರವನ್ನು ನೀಡಿ ಗೌರವಿಸಲಾಗಿತ್ತು.
ಆದರೆ ಒಂದು ವರ್ಷದ ಹಿಂದೆ ಇವರಿಗೆ ಕ್ಯಾನ್ಸರ್ ತಗುಲಿರುವುದು ಗೊತ್ತಾಗಿತ್ತು. ಅಂದಿನಿಂದ ಇವರು ಚಿಕಿತ್ಸೆ ಪಡೆಯುತ್ತಿದ್ದರು. ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಗುರುವಾರ ನಿಧನರಾದರು. ಪಾಲಕರಲ್ಲದೆ ಪತ್ನಿ, ಎಂಟು ಮತ್ತು ನಾಲ್ಕು ವರ್ಷ ವಯಸ್ಸಿನ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಇವರ ಅಂತ್ಯಸಂಸ್ಕಾರವನ್ನು ಬೆಂಗಳೂರಿನಲ್ಲೇ ನೆರವೇರಿಸಲು ಕರ್ನಲ್ ನವಜೋತ್ ಸಿಂಗ್ ಬಲ್ ಅವರ ಪಾಲಕರು ನಿರ್ಧರಿಸಿದ್ದರು. ಆದರೆ ಆಡಳಿತಾತ್ಮಕ ಅಡೆತಡೆಗಳಿಂದಾಗಿ ಸೇನಾಪಡೆಯ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಬರಲು ಸಾಧ್ಯವಾಗಲಿಲ್ಲ. ದೇಶಾದ್ಯಂತ ಲಾಕ್ಡೌನ್ ಹೊರತಾಗಿಯೂ ಇವರು ರಸ್ತೆ ಮಾರ್ಗದಲ್ಲೇ ಗುರುಗ್ರಾಮದಿಂದ ಬೆಂಗಳೂರಿಗೆ ಬರುತ್ತಿದ್ದಾರೆ.
ಶುಕ್ರವಾರ ಬೆಳಗ್ಗೆ ಹೊರಟಿರುವ ಇವರು ಶನಿವಾರ ಬೆಳಗ್ಗೆ ಬೆಂಗಳೂರು ತಲುಪುವ ನಿರೀಕ್ಷೆಯಿದೆ. ನಂತರದಲ್ಲಿ ಕರ್ನಲ್ ನವಜೋತ್ ಸಿಂಗ್ ಬಲ್ ಅವರ ಅಂತ್ಯಸಂಸ್ಕಾರ ನೆರವೇರಲಿದೆ.
ಗಡಿಯಲ್ಲಿ ಭಾರತೀಯ ಸೇನಾಪಡೆಯಿಂದ ಉಗ್ರರ ಲಾಂಚ್ಪ್ಯಾಡ್ ಮೇಲೆ ಭಾರಿ ದಾಳಿ, ಒಂದು ಲಾಂಚ್ಪ್ಯಾಡ್ ಸಂಪೂರ್ಣ ಧ್ವಂಸ