ನವದೆಹಲಿ: ಲಡಾಖ್ನ ಪೂರ್ವಭಾಗದ ವಾಸ್ತವ ಗಡಿರೇಖೆ ಬಳಿಯ ವಾಸ್ತವ ಪರಿಸ್ಥಿತಿ ಅರಿಯಲು ಹಾಗೂ ಚೀನಾದ ಮಿಲಿಟರಿ ಅಧಿಕಾರಿಗಳೊಂದಿಗೆ ನಡೆದಿರುವ ಮಾತುಕತೆಯ ವಿವರ ಪಡೆಯಲು ಲಡಾಖ್ಗೆ ತೆರಳಿರುವ ಸೇನಾಪಡೆ ಮುಖ್ಯಸ್ಥ ಜನರಲ್ ಎಂ.ಎಂ. ನರವಾನೆ, ಗಲ್ವಾನ್ ಘರ್ಷಣೆಯಲ್ಲಿ ಗಾಯಗೊಂಡ ಭಾರತೀಯ ಯೋಧರ ಆರೋಗ್ಯ ವಿಚಾರಿಸಿದರು.
ಲೇಹ್ನ ಮಿಲಿಟರಿ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರತಿಯೊಬ್ಬ ಯೋಧರ ಬಳಿ ಹೋಗಿ ಯೋಗಕ್ಷೇಮ ವಿಚಾರಿಸಿದರು. ಸಾಂತ್ವನ ಹೇಳಿದರು.
ಜೂ.15ರಂದು ಗಲ್ವಾನ್ ನದಿ ಮತ್ತು ಶಿಯಾಕ್ ನದಿಯ ಸಂಗಮ ಸ್ಥಳದ ವೈ ಜಂಕ್ಷನ್ನಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ರಕ್ತಸಿಕ್ತ ಘರ್ಷಣೆ ಏರ್ಪಟ್ಟು ಭಾರತದ 20 ಯೋಧರು ಹುತಾತ್ಮರಾಗಿದ್ದರು. 76ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದರು.
ಭಾರತ ಮತ್ತು ಚೀನಾದ ಹಿರಿಯ ಮಿಲಿಟರಿ ಅಧಿಕಾರಿಗಳು ಗಲ್ವಾನ್ ಘರ್ಷಣೆ ಮತ್ತು ಇತರ ವಿವಾದಾತ್ಮಕ ವಿಷಯಗಳ ಬಗ್ಗೆ ಸೋಮವಾರ ಬೆಳಗ್ಗೆಯಿಂದ ತಡರಾತ್ರಿಯವರೆಗೆ ಸತತ 11 ಗಂಟೆ ಮಾತುಕತೆ ನಡೆಸಿದ್ದರು. ಲಡಾಖ್ನ ಚುಶುಲ್ನಲ್ಲಿ ಚೀನಾದ ಪ್ರದೇಶದಲ್ಲಿರುವ ಮಾಲ್ಡೋದಲ್ಲಿ ನಡೆದ ಮಾತುಕತೆಯ ಬೆನ್ನಲ್ಲೇ ಸೇನಾಪಡೆ ಮುಖ್ಯಸ್ಥ ಜನರಲ್ ಎಂ.ಎಂ. ನರವಾನೆ ಲಡಾಖ್ಗೆ ಭೇಟಿ ನೀಡಿದ್ದಾರೆ.