ಬೆಂಗಳೂರು: ವಾರ ಕಳೆದರೂ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ ಎಂಬುದನ್ನು ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅರ್ಜುನ್ ಸರ್ಜಾರಿಗಂತೂ ಪ್ರೀತಿ ಪಾತ್ರನಾಗಿದ್ದ ಚಿರು ಸಾವು ಇನ್ನಿಲ್ಲದ ಆಘಾತ ತಂದೊಡ್ಡಿದೆ. ಹೀಗಾಗಿಯೇ ವಿಧಿ ನೀ ತುಂಬಾ ಕ್ರೂರಿ ಎಂದು ಫೇಸ್ಬುಕ್ನಲ್ಲಿ ಅರ್ಜುನ್ ಆಕ್ರೋಶ ಹೊರಹಾಕಿದ್ದರು.
ಚಿರು ಇಲ್ಲವೆಂಬುದನ್ನು ಮರೆಯಲು ಸಾಧ್ಯವಾಗದೇ ಅರ್ಜುನ್ ಸರ್ಜಾ ವಿಡಿಯೋ ಸಂದೇಶದ ಮೂಲಕ ಚಿರು ಬಳಿ ಮನವಿ ಮಾಡಿಕೊಂಡಿರುವುದು ತುಂಬಾ ಭಾವುಕವಾಗಿದೆ. ಚಿರು ಫೋಟೋಗಳನ್ನೊಳಗೊಂಡ ವಿಡಿಯೋ ತುಣುಕಿಗೆ ಹಿನ್ನೆಲೆ ಧ್ವನಿ ನೀಡಿರುವ ಅರ್ಜುನ್ ಸರ್ಜಾ, ಚಿರುವನ್ನು ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಇದನ್ನೂ ಓದಿ: ಒಂದು ಗಂಟೆಗೆ ಒಂದು ಲಕ್ಷ ರೂ. ಕೇಳಿದ ನಟಿ ಶ್ರುತಿ ಹಾಸನ್…!
ನಿನ್ನ ಮನಸ್ಸಿಗೆ ಯಾರಾದರೂ ಬೇಜಾರು ಮಾಡಿದ್ರೆ, ನೀನು ಕೋಪ ಮಾಡಿಕೊಂಡಿದ್ರು, ಮಾತಾಡದಿದ್ರು, ನಮ್ಮನ್ನು ಬೈದಿದ್ರು ಹಾಗೂ ನಮಗೆ ಹೇಳದೇ ಯಾವುದಾದರೂ ಊರಿಗೆ ಹೋಗಿ ಬಂದಿದ್ರು ಪರವಾಗಿರುತ್ತಿರಲಿಲ್ಲ. ಆದರೆ, ನೀನು ಮರಳಿ ಬಾರದಂತಹ ಊರಿಗೆ ಹೋಗಿ ನಮಗೆಲ್ಲ ಇಂತಹ ಶಿಕ್ಷೆ ಕೊಟ್ಬಿಟ್ಟಲಪ್ಪ. ಕಣ್ಣು ಮುಚ್ಚಿಕೊಂಡರು, ಕಣ್ಣು ತೆಗೆದರು ನೀನೇ ಕಾಣ್ತೀಯ. ನಿನ್ನ ನಗು ಮುಖವೇ ಕಾಣುತ್ತದೆ ಎಂದು ದುಃಖ ತುಂಬಿದ ಮಾತಗಳನ್ನಾಡಿದ್ದಾರೆ.
ಸರಿ ಸ್ವಲ್ಪ ದಿನ ಆದ್ಮೇಲೆ ಮರೆತುಬಿಡುತ್ತಾರೆ ಅಂದುಕೊಂಡಿದ್ದರೆ ಅದು ಸುಳ್ಳು. ನಮ್ಮೆಲ್ಲರಿಗೂ ಇದು ದೊಡ್ಡ ಗಾಯ. ಆರದೆ ಇರುವಂತಹ ಗಾಯ. ಯಾವಾಗಲೂ ನೀನು ನಮ್ಮ ಮನಸ್ಸಿನಲ್ಲಿ, ಹೃದಯದಲ್ಲೇ ಇರುತ್ತೀಯ ಕಂದ. ನಿಮ್ಮ ತಾತ ನಿನಗೆ ಚಿರಂಜೀವಿ ಎಂದು ಹೆಸರಿಟ್ಟರು. ಅದು ಎಂದಿಗೂ ಸುಳ್ಳಾಗಲ್ಲ. ನಿನ್ನ ಮಾತು, ನಿನ್ನ ನಗು, ನಿನ್ನ ನೆನಪು, ನಮ್ಮ ಸಂಬಂಧ ಯಾವಾಗಲೂ ಚಿರಂಜೀವಿಯಾಗೇ ಇರುತ್ತದೆ ಬಂಗಾರ ಎಂದು ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ: ಶ್ರೀರಂಗಪಟ್ಟಣದ ಲಾಡ್ಜ್ನಲ್ಲಿ ಮಹಿಳೆ ಕೊಲೆ: ಮೈಮೇಲೆ ಬಟ್ಟೆಯಿಲ್ಲದ ಸ್ಥಿತಿಯಲ್ಲಿ ಮೃತದೇಹ ಪತ್ತೆ
ಮುಂದುವರಿದು ಮಾತನಾಡಿರುವ ಅರ್ಜುನ್ ಸರ್ಜಾ, ಚಿರು ಎಲ್ಲರೂ ಹೇಳ್ತಾರೆ ಈ ನೋವನ್ನು ತಡೆದುಕೊಳ್ಳುವ ಶಕ್ತಿ ಆ ದೇವರು ಇಡೀ ಕುಟುಂಬಕ್ಕೆ ಕೊಡಲೆಂದು. ಆದರೆ, ಅದು ನಿನ್ನ ಕೈನಲ್ಲಿದೆ. ಹೇಗೆಂದರೆ ನೀನೇ ನಿನ್ನ ಮಗುವಾಗಿ ನಮ್ಮ ಮಡಲಿಗೆ ಬಂದ್ಬಿಡು ಕಂದ. ಆ ಮಗು ನಗುವಿನಲ್ಲಿ ನಿನ್ನನ್ನ ನೋಡ್ಕೋತೀವಿ… ಪ್ಲೀಸ್.. ವೀ ಲವ್ ಯು ಸೋ ಮಚ್… ಯಾವಾಗಲೂ ನಿನ್ನ ನೆನಪಿನಲ್ಲೇ ನಿಮ್ಮ ಅಜ್ಜಿ, ಅಮ್ಮ, ಹೆಂಡತಿ, ಅತ್ತೆ-ಮಾವಂದಿರು, ತಮ್ಮಂದಿರು, ತಂಗಿಯರು, ಇಡೀ ಕುಟುಂಬ ವರ್ಗ ಮತ್ತು ನಿನ್ನ ಅಭಿಮಾನಿ ದೇವರುಗಳು ಇದ್ದಾರೆಂದು ಚಿರುವನ್ನು ಸರ್ಜಾ ಬೇಡಿಕೊಂಡಿದ್ದು, ಎಂತವರ ಕಣ್ಣಲ್ಲೂ ನೀರು ತರಿಸುತ್ತದೆ. (ದಿಗ್ವಿಜಯ ನ್ಯೂಸ್)
ಅಗಲಿದ ಚಿರುವನ್ನು ವಿಡಿಯೋ ಸಂದೇಶದ ಮೂಲಕ ಪರಿಪರಿಯಾಗಿ ಬೇಡಿಕೊಂಡ ಅರ್ಜುನ್ ಸರ್ಜಾ
ಅಗಲಿದ ಚಿರುವನ್ನು ವಿಡಿಯೋ ಸಂದೇಶದ ಮೂಲಕ ಪರಿಪರಿಯಾಗಿ ಬೇಡಿಕೊಂಡ ಅರ್ಜುನ್ ಸರ್ಜಾ#ArjunSarja #ChiranjeeviSarja #SadDemise #Sandalwood
Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಜೂನ್ 16, 2020