ಶಿರಸಿ: ಹಿಂದಿನಿಂದಲೂ ಅರಣ್ಯ ಅತಿಕ್ರಮಣ ಮಾಡಿಕೊಂಡು ತಮ್ಮ ಹಕ್ಕಿಗಾಗಿ ಅರ್ಜಿ ಸಲ್ಲಿಸಿರುವ ಜಿಲ್ಲೆಯ 85 ಸಾವಿರಕ್ಕೂ ಅಧಿಕ ನಿವಾಸಿಗಳಿಗೆ ನ್ಯಾಯ ಇನ್ನೂ ಸಿಕ್ಕಿಲ್ಲ. ಹಲವು ಹಂತದ ಹೋರಾಟಗಳು ನಡೆದಿದ್ದರೂ ಜಿಲ್ಲೆಯ ಜನಪ್ರತಿನಿಧಿಗಳು ಅರಣ್ಯ ಅತಿಕ್ರಮಣದಾರರಿಗೆ ನ್ಯಾಯ ಒದಗಿಸಿಲ್ಲ. ಹೀಗಾಗಿ, ಶೀಘ್ರದಲ್ಲಿ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಅರಣ್ಯ ಅತಿಕ್ರಮಣದಾರರಿಗೆ ನ್ಯಾಯ ಒದಗಿಸಲು ಸರ್ಕಾರದ ಮೇಲೆ ಒತ್ತಡ ತರುವಂತೆ ಅವರಿಗೆ ಮನವಿ ನೀಡಲು ನಿರ್ಧರಿಸಿದ್ದೇವೆ ಎಂದು ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ ನಾಯ್ಕ ಕಾಗಾಲ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಅರ್ಜಿ ಸಲ್ಲಿಸಿದವರಿಗೆ ಅರಣ್ಯ ಸಂರಕ್ಷಣಾ ಕಾಯ್ದೆ 1980ರ ಅಡಿ ಹಕ್ಕು ಪತ್ರ ನೀಡಲು ಅವಕಾಶವಿತ್ತು. 1978ರ ಪೂರ್ವದಲ್ಲಿ ಅತಿಕ್ರಮಣ ಮಾಡಿಕೊಂಡು ಕೃಷಿ ಕಾರ್ಯ ನಡೆಸುತ್ತಿರುವವರಿಗೂ ಇನ್ನೂ ಪೂರ್ಣ ಪ್ರಮಾಣದ ಮಂಜೂರಾತಿ ನೀಡಲಾಗಿಲ್ಲ. ಈ ಎಲ್ಲವನ್ನೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಿದ್ದೇವೆ ಎಂದರು.
ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ, ಟ್ರಾಮಾ ಸೆಂಟರ್ ಇನ್ನೂ ನಿರ್ವಣಗೊಂಡಿಲ್ಲ. ಹಿಂದುಳಿದ ಮತ್ತು ಬಡವರ ಅಭಿವೃದ್ಧಿಗಾಗಿ ಸಲ್ಲಿಸಲಾಗಿರುವ ಎಚ್. ಕಾಂತರಾಜ ವರದಿ ಜಾರಿಗೆ ತರುವಂತೆ ಸರ್ಕಾರದ ಮೇಲೆ ಒತ್ತಡ ತರಲು ಈ ಭೇಟಿಯಲ್ಲಿ ಆಗ್ರಹಿಸಲಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆ ಪ್ರಮುಖರಾದ ವಿ.ಎನ್. ನಾಯ್ಕ, ತಿ.ನ. ಶ್ರೀನಿವಾಸ, ಎಂ.ಡಿ. ನಾಯ್ಕ, ಬೆನೆತ್ ಸಿದ್ದಿ, ಕನ್ನೇಶ ನಾಯ್ಕ, ವೀರಭದ್ರ ನಾಯ್ಕ, ಶಫಿ ಶೇಖ್, ವಸಂತ ಲಮಾಣಿ, ಇತರರಿದ್ದರು.