ಹೈದರಾಬಾದ್: ದುರ್ವಿಧಿ ಅನ್ನೋದು ಇದಕ್ಕೆ ಇರಬಹುದು.
ಅಪಘಾತವೊಂದರಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದ. ಆ ವ್ಯಕ್ತಿಯ ಕುಟುಂಬದ ಮೂವರು ಅಪಘಾತ ನಡೆದ ಸ್ಥಳಕ್ಕೆ ಧಾವಿಸಲು ಮುಂದಾದರು. ಆಗ ಮತ್ತೊಂದು ಅಪಘಾತ ಸಂಭವಿಸಿ, ಮೂವರೂ ಸಾವನ್ನಪ್ಪಿದರು. ಈ ಎರಡೂ ಅಪಘಾತಗಳಿಗೆ ಮೂಲ ಕಾರಣ ದಟ್ಟವಾದ ಮಂಜು.
ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಮಂಜು ಕವಿದ ವಾತಾವರಣದಿಂದಾಗಿ ಎನ್ಎಚ್ 186ರಲ್ಲಿ ಸಂಭವಿಸಿದ ಎರಡು ರಸ್ತೆ ಅಪಘಾತಗಳಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಭಾನುವಾರ ರಾತ್ರಿ ಗೋಚರತೆ ಸರಿಯಾಗಿಲ್ಲದ ಕಾರಣ ವೇಂಪಹಾಡ್ನಲ್ಲಿ ನಡೆದ ಮೊದಲ ಅಪಘಾತದಲ್ಲಿ, ಪಾದಚಾರಿಯೊಬ್ಬ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ.
ನಾಗರಾಜು (28), ರಾಮಾವತ್ ಕೇಶವ್ (19) ಎಂಬುವರು ನಡೆದುಕೊಂಡು ಹೋಗುತ್ತಿದ್ದ ವೇಳೆ ಅವರಿಗೆ ಬೈಕ್ ಡಿಕ್ಕಿ ಹೊಡೆದಿದ್ದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ಬಗ್ಗೆ ರಾಮಾವತ್ ಕೇಶವ್ ಅವರ ಕುಟುಂಬಕ್ಕೆ ತಿಳಿದಾಗ, ಅವರು ಮಂಜು ಕವಿದ ವಾತಾವರಣದ ನಡುವೆಯೇ ಪಾರ್ವತಿಪುರಂ ಬಳಿ ಅವರ ಟಾಟಾ ಏಸ್ ವಾಹನದಲ್ಲಿ ಬರುತ್ತಿದ್ದಾಗ ತೈಲ ಟ್ಯಾಂಕರ್ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಟಾಟಾ ಏಸ್ ನಲ್ಲಿ ಪ್ರಯಾಣಿಸುತ್ತಿದ್ದ ಏಳು ಜನರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಮೃತ ಮೂವರನ್ನು ರಾಮಾವತ್ ಪಾಂಡು (40), ರಾಮಾವತ್ ಘನ್ಯಾ (40) ಮತ್ತು ರಾಮಾವತ್ ಬುಜ್ಜಿ (38) ಎಂದು ಗುರುತಿಸಲಾಗಿದೆ.
ಮೃತ ಐವರು ಮಲ್ಲೇವಣಿ ಕುಂಟ ತಾಂಡಾ ಗ್ರಾಮದವರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಿರ್ಯಾಲಗೂಡ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ರಸ್ತೆ ಕಾಣದೆ ದೆಹಲಿ ಬಳಿ 10 ಕಾರುಗಳು ಪರಸ್ಪರ ಡಿಕ್ಕಿ: ಉತ್ತರಪ್ರದೇಶಕ್ಕೆ ಪ್ರಯಾಣಿಸುವವರು ಹುಷಾರು…