More

    ಸಮಾನತೆಗಾಗಿ ಭೀಮ ಮಂದಿರ ಅಭಿಯಾನ: ಅನಿಲ್​ ಮೆಣಸಿನಕಾಯಿ

    ವಿಜಯವಾಣಿ ಸುದ್ದಿಜಾಲ ಗದಗ
    ಜಿಲ್ಲೆ ಭಾವೈಕ್ಯತೆಯ ನಾಡಾಗಿದೆ. ಕೋವಿಡ್​ ಸಂದರ್ಭದಲ್ಲಿ ಮನುಕುಲಕ್ಕಾಗಿ ಭಿಕ್ಷೆ ನಡೆಸಲಾಗಿತ್ತು. ಇಂದು ಸಮಾನತೆಗಾಗಿ ಭೀಮ ಮಂದಿರ ಅಭಿಯಾನ ಆರಂಭಿಸಲಾಗಿದೆ. ಇದರ ಭಾಗವಾಗಿ ಏ.14 ರಂದು ಗದಗ ನಗರದಲ್ಲಿ ಭೀಮ, ರಾಮ, ಭೀಮ, ಬುದ್ಧ, ಬಸವ, ಶಿಶುನಾಳ ಶರೀಫನ ಭವ್ಯ ಮೆರವಣಿಗೆ ಆಯೋಜಿಸಲಾಗಿದೆ ಎಂದು ಬಿಜೆಪಿ ಯುವ ಮುಖಂಡ ಅನಿಲ ಮೆಣಸಿನಕಾಯಿ ಹೇಳಿದರು.
    ಶನಿವಾರ ಗದಗ ನಗರದ ಪ್ರತಿಕಾ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ತೋಂಟದಾರ್ಯ ಮಠದ ಆವರಣದಿಂದ ಭಾನುವಾರ ಸಂಜೆ 4 ಕ್ಕೆ ಮೆರವಣಿಗೆ ಆರಂಭವಾಗಲಿದೆ. ಮೆರವಣಿಗೆಯುದ್ದಕ್ಕೂ ಡೊಳ್ಳು ಕುಣಿತ, ಕೋಲಾಟ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಲಿವೆ. ಅಂಬೇಡ್ಕರ ಅವರ ಸಂವಿಧಾನ ಗ್ರಂಥವೂ ಮೆರವಣಿಗೆಯಲ್ಲಿರಲಿದೆ. ಈ ಕಾರ್ಯಕ್ರಮದಲ್ಲಿ ಎಲ್ಲ ವರ್ಗದ ಜನಾಂಗದವರು ಭಾಗವಹಿಸಲಿದ್ದಾರೆ ಎಂದರು.
    ಈಚೆಗೆ ತಾಲೂಕಿನ ಕುರ್ತಕೋಟಿ ಗ್ರಾಮದಲ್ಲಿ ಓರ್ವ ಕುಟುಂಬದವರು ಭೀಮ, ರಾಮ, ಬುದ್ಧ, ಬಸವ, ಶರೀಫರ ಮಂದಿರ ಆಗಬೇಕೆಂದು ಎರಡು ಎಕರೆ ಜಮೀನು ದಾನವಾಗಿ ನೀಡಿದ್ದಾರೆ. ಜಾತಿ ವ್ಯವಸ್ಥೆ ಮರೆತು ಮನುಷ್ಯರು ಮನುಷ್ಯರಾಗಿ ಬಾಳಲಿ ಎನ್ನುವ ಉದ್ದೇಶದಿಂದ ಭೀಮ ಮಂದಿರ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಚುನಾವಣೆ ಮುಗಿದ ನಂತರ ಭೀಮ ಮಂದಿರ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದರು.
    ಸಮಾನತೆ ಸಾರಿದ ಮಹಾತ್ಮರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಚುನಾವಣೆ ಸಮಯದಲ್ಲಿ ರೊಟ್ಟಿ ಅಭಿಯಾನ ಮಾಡಿದ್ದೆ. ಪ್ರೀತಿಯಿಂದ ಎಲ್ಲ ಜನಾಂಗದವರು ಒಂದು ತುತ್ತು ರೊಟ್ಟಿ ನೀಡಿದ್ದಾರೆ. ಇಂತಹ ಮಾನವೀಯ ಗುಣ ಹೊಂದಿದ ಈ ನಾಡಿನಲ್ಲಿ ಭೀಮ ಮಂದಿರ ನಿರ್ಮಾಣ ಆಗಬೇಕು ಎನ್ನುವುದು ನಮ್ಮೆಲ್ಲರ ಕನಸಾಗಿದೆ. ಕುರ್ತಕೋಟಿಯಲ್ಲಿ ನಿರ್ಮಾಣವಾಗುವ ಭೀಮ ಮಂದಿರದಲ್ಲಿ ಪ್ರತಿ ನಿತ್ಯವೂ ಶರೀಫನವರ ತತ್ವ ಪದಗಳು, ಶ್ರೀರಾಮನ ಭಜನೆ, ಬುದ್ಧನ ತತ್ವ, ಬಸವಣ್ಣನವರ ವಚನ ಸೇರಿದಂತೆ ಸಮಾಜದಲ್ಲಿ ಸಮಾನತೆ ಮೂಡಿಸುವ ಧಾಮಿರ್ಕ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.
    ವಿಧಾನಸಭೆ ಚುನಾವಣೆಯಲ್ಲಿ ಅನಿಲ ಅವರನ್ನು ಬಿಜೆಪಿ ಪಕ್ಷದವರೇ ಸೋಲಿಸಿದ್ದಾರೆ ಎನ್ನುವ ಆರೋಪಗಳ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಅದಕ್ಕೆಲ್ಲಾ ಇದು ಸಮಯವಲ್ಲ. ಸದ್ಯ ಬೊಮ್ಮಾಯಿ ಅವರ ಚುನಾವಣೆ ನಡೆಸಬೇಕಿದೆ. ದೇಶಕ್ಕೆ ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡಬೇಕಿದೆ. ಸದ್ಯಕ್ಕೆ ಆ ಬಗ್ಗೆ ನಾನೇನೂ ಮಾತನಾಡುವುದಿಲ್ಲ ಎಂದರು.
    ಕಾಂತಿಲಾಲ್​ ಬನ್ಸಾಲಿ, ರವಿ ಶಿದ್ಲಿಂಗ, ಚಂದ್ರಶೇಖರ ಹರಿಜನ, ಪರಮೇಶ್​ ನಾಯಕ್​, ಚಾಂದಸಾಬ್​ ಕೊಟ್ಟೂರ, ವಸಂತ ಪಡಗದ, ಶರಣು ಚಿಂಚಲಿ, ಕೆ.ವಿ.ಗದುಗಿನ, ಉಡಚಪ್ಪ ಹಳ್ಳಿಕೇರಿ, ಮಂಜುನಾಥ ಮ್ಯಾಗೇರಿ, ಸೇರಿದಂತೆ ಅನೇಕರು ಇದ್ದರು.

    ಬಾಕ್ಸ್​:
    ಬಿಜೆಪಿ ಹಿರಿಯ ಮುಖಂಡ ಕಾಂತಿಲಾಲ್​ ಬನ್ಸಾಲಿ ಮಾತನಾಡಿ ನಾನು ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ. ಗದಗ ಜಿಲ್ಲೆಯಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ಬೇರೆ ಕ್ಷೇತ್ರದವರು ಬಂದು ಇಲ್ಲಿ ಶಾಸಕರಾಗಲು ನಾನು ಬಿಡುವುದಿಲ್ಲ. ಅನಿಲ ಮೆಣಸಿನಕಾಯಿ ಅವರನ್ನು ಶಾಸಕರನ್ನಾಗಿ ಮಾಡುವತನಕವೂ ನಾವು ವಿಶ್ರಮಿಸುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಶಪಥ ಮಾಡಿದ್ದು ವಿಶೇಷವಾಗಿತ್ತು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts