ಅನ್ಸಾರ್ ಇನೋಳಿ ಉಳ್ಳಾಲ
ಕಡಲಬ್ಬರದ ನಡುವೆಯೇ ಸೋಮೇಶ್ವರದ ಬಟ್ಟಪ್ಪಾಡಿ, ಉಚ್ಚಿಲ, ಮುಕಚ್ಚೇರಿ ಸೀಗ್ರೌಂಡ್ನಲ್ಲಿ ಅಧಿಕ ಸಂಖ್ಯೆಯಲ್ಲಿ ಮತ್ಸೃಪ್ರಿಯರು ಮೀನು ಬೇಟೆಯಲ್ಲಿ ತೊಡಗಿರುವುದು ಕಂಡುಬಂದಿದೆ.
ಮಳೆಗಾಲದಲ್ಲಿ ಮೀನು ದರ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ಮತ್ಸೃ ಪ್ರಿಯರು ಸ್ವತಃ ಮೀನು ಬೇಟೆಗೆ ಇಳಿಯುತ್ತಾರೆ. ಉಳ್ಳಾಲ, ಸೋಮೇಶ್ವರ ನದಿತಟದಲ್ಲಿ ಹಿಂದೆಂಗಿಂತಲೂ ಹೆಚ್ಚು ಮಂದಿ ಗಾಳ ಹಾಕಿ ಮೀನು ಹಿಡಿಯುತ್ತಿದ್ದಾರೆ.
ಗಾಳಪ್ರಿಯರ ಪ್ರಕಾರ ಮಳೆಗಾಲದಲ್ಲಿ ಸಮುದ್ರದಬ್ಬರಕ್ಕೆ ಮೀನುಗಳು ತಟಕ್ಕೆ ಬಂದು, ಕಡಲ್ಕೊರೆತ ತಡೆಗೆ ಹಾಕುವ ಕಲ್ಲುಗಳ ಮಧ್ಯೆ ಸಿಲುಕುತ್ತವೆ. ಇಲ್ಲೇ ಗಾಳ ಹಾಕಿದರೆ ಮೀನು ಸಿಗುವುದು ಪಕ್ಕಾ ಎನ್ನುತ್ತಾರೆ.
ಕೇವಲ ಹವ್ಯಾಸಕಕ್ಕಾಗಿ ಮೀನು ಹಿಡಿಯುವವರು ಹೆಚ್ಚು. ಬೆಳಗ್ಗೆಯಿಂದ ಸಂಜೆವೆರೆಗೂ ಗಾಳ ಹಾಕಿ ಕಾದು ಕಾಲಿಕೈಯಲ್ಲಿ ಹೋಗುವುದೂ ಇದೆ. ಚೀಲ ತುಂಬಾ ಮೀನು ಕೊಂಡೊಯ್ದವರೂ ಇದ್ದಾರೆ. ಮನೆ ಬಳಕೆಗೆ ಹೆಚ್ಚಾದರೆ ಮಾರಾಟ ಮಾಡುತ್ತಾರೆ. ಸಮುದ್ರ ತಡದಲ್ಲಿ ಮೀನು ಬೇಟೆ ಅಪಾಯಕಾರಿಯೂ ಹೌದು. ಏಕಾಏಕಿ ಅಲೆ ಬಡಿದರೆ ಹೊಸಬರಿಗೆ ಸಂಕಷ್ಟವನ್ನುಂಟು ಮಾಡಬಹುದು.