More

    ಅಂಗನವಾಡಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಡಿಸಿ ಸೂಚನೆ

    ಶಿವಮೊಗ್ಗ: ವಿವಿಧ ಯೋಜನೆಗಳಡಿ ಮಂಜೂರಾಗಿರುವ ಮತ್ತು ಅರ್ಧಕ್ಕೆ ನಿಂತಿರುವ ಅಂಗನವಾಡಿ ಕಟ್ಟಡಗಳ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ತಿಳಿಸಿದರು.
    ಡಿಸಿ ಕಚೇರಿಯಲ್ಲಿ ಶುಕ್ರವಾರ ವಿವಿಧ ಯೋಜನೆಗಳಡಿ ಮಂಜೂರಾದ ಅಂಗನವಾಡಿ ಕಟ್ಟಡಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಎಲ್ಲ ತಾಲೂಕುಗಳಲ್ಲಿ ನರೇಗಾ, ಎಸ್‌ಡಿಪಿ, ಅಮೃತ ಯೋಜನೆ, ಅನುಸೂಚಿತ ಜಾತಿ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ, ಪ್ರಧಾನಮಂತ್ರಿ ಜನವಿಕಾಸ ಕಾರ್ಯಕ್ರಮ ಸೇರಿದಂತೆ ವಿವಿಧ ಯೋಜನೆಯಡಿ ಮಂಜೂರಾಗಿ ಸ್ಥಳ ಸಮಸ್ಯೆ, ಕಾಮಗಾರಿ ಬದಲಾವಣೆ, ಅನುದಾನ ಕೊರತೆ ಹೀಗೆ ಹಲವಾರು ಕಾರಣಗಳಿಗೆ ಅರ್ಧದಲ್ಲೇ ನಿಂತಿರುವ ಮತ್ತು ಇನ್ನೂ ಕಾಮಗಾರಿ ಆರಂಭವಾಗದ ಕಟ್ಟಡಗಳನ್ನು ಅಗತ್ಯ ಕ್ರಮವಹಿಸಿ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದರು.
    ವಿವಿಧ ಯೋಜನೆಗಳಡಿ 2015-16ನೇ ಸಾಲಿನಿಂದ ಇಲ್ಲಿವರೆಗೆ ಅನೇಕ ಅಂಗನವಾಡಿ ಕಟ್ಟಡಗಳು ಅಪೂರ್ಣವಾಗಿವೆ. ಅವುಗಳ ಪಟ್ಟಿ ತಯಾರು ಮಾಡಿ ಪೂರ್ಣಗೊಳಿಸಲು ಕ್ರಮ ವಹಿಸಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು ತಾಲೂಕುವಾರು ಮಂಜೂರಾದ, ಪ್ರಗತಿಯಲ್ಲಿರುವ, ಪೂರ್ಣಗೊಂಡ ಮತ್ತು ಆರಂಭ ಆಗದೇ ಇರುವ ಅಂಗನವಾಡಿ ಕಟ್ಟಡಗಳ ಪಟ್ಟಿ ಮಾಡಿ ನೀಡಬೇಕು. ಪ್ರತಿ ತಿಂಗಳು ಈ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಬೇಕು ಎಂದರು.
    ನಗರ ಭಾಗದಲ್ಲಿ ಅಂಗನವಾಡಿ ಕಟ್ಟಡಗಳು ಅಪೂರ್ಣವಾಗಿದ್ದರೆ ಅಥವಾ ಕಟ್ಟಡದ ಅಗತ್ಯವಿದ್ದಲ್ಲಿ ಪಟ್ಟಿ ಮಾಡಿ ನೀಡಿದಲ್ಲಿ ನಗರ ಸ್ಥಳೀಯ ಸಂಸ್ಥೆಗಳೊಂದಿಗೆ ಮಾತನಾಡಿ ಹಣ ಮಂಜೂರು ಮಾಡಿಸಲು ಕ್ರಮ ಕೈಗೊಳ್ಳುತ್ತೇನೆ. ಗ್ರಾಮೀಣ ಭಾಗದಲ್ಲಿ ಅನೇಕ ಅಂಗನವಾಡಿಗಳು ಅಪೂರ್ಣವಾಗಿದ್ದು ಜಿಪಂ ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ವಹಿಸಬೇಕು ಎಂದರು.
    ನಿರ್ಮಿತಿ ಕೇಂದ್ರ, ಪಿಆರ್‌ಇಡಿ, ಪಿಡಬ್ಲ್ಯುಡಿ ಮತ್ತು ಗ್ರಾಪಂಗೆ ವಹಿಸಲಾದ ಅಂಗನವಾಡಿ ಕಟ್ಟಡಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ ನೀಡಬೇಕು. ಅಂಗನವಾಡಿ ಕಟ್ಟಡಗಳ ಕಾಮಗಾರಿಯನ್ನು ಈ ಇಂಜಿನಿಯರಿಂಗ್ ವಿಭಾಗಗಳಿಗೆ ನೀಡುವುದಕ್ಕಿಂತ ಆಯಾ ಗ್ರಾಪಂ, ತಾಪಂಗಳಿಗೆ ನೀಡಿದರೆ ಉತ್ತಮ. ಇದರಿಂದ ಶೀಘ್ರವಾಗಿ ಕೆಲಸ ಸಾಧ್ಯವಾಗುತ್ತದೆ. ಪ್ರಸ್ತುತ ಬಾಕಿ ಇರುವ ಅಂಗನವಾಡಿ ಕಟ್ಟಡಗಳನ್ನು ಜಿಪಂ, ತಾಪಂ ಮತ್ತು 15ನೇ ಹಣಕಾಸು ಮತ್ತು ಇತರೆ ಅನುದಾನದಲ್ಲಿ ಪೂರ್ಣಗೊಳಿಸುವಂತೆ ತಿಳಿಸಿದರು.
    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ(ಪ್ರಭಾರ) ಚಂದ್ರಪ್ಪ, ನಿರ್ಮಿತಿ ಕೇಂದ್ರ, ಪಿಆರ್‌ಇಡಿ, ಪಿಡಬ್ಲ್ಯುಡಿ ಅಧಿಕಾರಿಗಳು, ವಿವಿಧ ತಾಲೂಕುಗಳ ಸಿಡಿಪಿಒಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts