ಆನೇಕಲ್: ಯುಕೆಜಿ ಓದುತ್ತಿದ್ದ ಮಗುವನ್ನು ಅನುತ್ತೀರ್ಣಗೊಳಿಸಿದ ಶಿಕ್ಷಣ ಸಂಸ್ಥೆಯ ವಿರುದ್ಧ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಕ್ರೋಶ ಹೊರಹಾಕಿದ್ದಾರೆ.
ಆನೇಕಲ್ ತಾಲೂಕಿನ ಹುಸ್ಕೂರು ಗೇಟ್ ಸಮೀಪದ ಬಳಿ ಇರುವ ಸೆಂಟ್ ಜೋಸೆಫ್ ಚಾಮಿನೇಡ್ ಅಕಾಡೆಮಿಯು ಯುಕೆಜಿ ಓದುತ್ತಿದ್ದ ಪುಟಾಣಿ ಬಿ. ನಂದಿನಿಯನ್ನು ಫೇಲ್ ಮಾಡುವ ಮೂಲಕ ಹೊಸ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದೆ.
ಈ ಸಂಗತಿ ಸುರೇಶ್ ಕುಮಾರ್ ಅವರ ಗಮನಕ್ಕೆ ಬಂದಿದ್ದು, ಶಾಲೆಯ ಆಡಳಿತ ಮಂಡಳಿಯ ವಿರುದ್ಧ ಫೇಸ್ಬುಕ್ ಮೂಲಕ ಕಿಡಿಕಾರಿದ್ದಾರೆ. ಮಗುವನ್ನು ಏನು ಮಾಡಲು ಹೊರಟಿದ್ದಾರೆ ಎಂದು ಗುಡುಗಿದ್ದಾರೆ. ವಿದ್ಯಾರ್ಥಿನಿಯ ಪೋಷಕರು ಸಹ ಸರಣಿ ಟ್ವೀಟ್ ಮಾಡಿ ಅಸಮಾಧಾನ ಹೊರಹಾಕಿದ್ದಾರೆ.
ಮಗುವನ್ನು ಫೇಲ್ ಮಾಡಿರುವ ಶಿಕ್ಷಣ ಸಂಸ್ಥೆಗೆ ತಲೆಯೂ ಇಲ್ಲ, ಹೃದಯ ಅಂತೂ ಮೊದಲೇ ಇಲ್ಲ. ಮಗುವನ್ನು ಏನು ಮಾಡಲು ಹೊರಟಿದೆ ಈ ಮಹಾ ಶಿಕ್ಷಣ ಸಂಸ್ಥೆ. ನನ್ನ ಗಮನಕ್ಕೆ ಈ ಮಹಾಕೃತ್ಯ ಗೊತ್ತಾದ ಕೂಡಲೇ ಆನೇಕಲ್ ತಾಲೂಕು ಶಿಕ್ಷಣ ಇಲಾಖೆಗೆ ಮಾಹಿತಿ ತಿಳಿಸಿದ್ದೇನೆ. ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದೇನೆ. ನಾನು ಕೂಡ ಒಮ್ಮೆ ಈ ಶಾಲೆಗೆ ಸದ್ಯದಲ್ಲೇ ಭೇಟಿ ನೀಡಿ ಪಾವನಾಗಲು ಬಯಸಿದ್ದೇನೆ ಎಂದು ಸುರೇಶ್ ಕುಮಾರ್ ಅವರು ಟೀಕಾ ಪ್ರಹಾರ ನಡೆಸಿದ್ದಾರೆ.
ಈ ಮಗುವಿನ ಪಾಲಕರು ಸಹ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನಮ್ಮ ಮಗಳನ್ನು ಜೋಸೆಫ್ ಚಾಮಿನೇಡ್ ಅಕಾಡೆಮಿಯು ಫೇಲ್ ಮಾಡಿದೆ. ಈ ಬಗ್ಗೆ ಶಾಲೆಯ ಆಡಳಿತ ಮಂಡಳಿಯನ್ನು ಸಂಪರ್ಕಿಸಿದಾಗ ಈ ವಿಚಾರದಲ್ಲಿ ಯಾವುದೇ ತೀರ್ಮಾನಕ್ಕೆ ಬರಲು ನಿರಾಕರಿಸಿತು. ಬೇರೆ ಮಕ್ಕಳ ಪಾಲಕರು ಈ ವಿಚಾರದಲ್ಲಿ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ಸದ್ಯಕ್ಕೆ ಒಂದು ಮಗುವಿಗೆ ನಾವೇನು ಮಾಡಲು ಆಗುವುದಿಲ್ಲ. ಬದಲಾಗಿ ಮಗುವಿನ ಫೇಲ್ ಆಗಿರುವ ಬಗ್ಗೆ ತಿಳಿಸಿ, ಭವಿಷ್ಯದಲ್ಲಿ ಚೆನ್ನಾಗಿ ಓದುವಂತೆ ಹೇಳಿ ಎಂದು ಪ್ರಾಂಶುಪಾಲರು ನಮಗೆ ಖಾರವಾಗಿ ಪ್ರತಿಕ್ರಿಯೆ ನೀಡಿದರು.
ಕೇವಲ 6 ವರ್ಷದ ಮಗುವನ್ನು ಫೇಲ್ ಮಾಡುವುದೆಂದರೆ ಏನು ಅರ್ಥ. ಇದು ಆಕೆಯ ಮಾನಸಿಕ ತೊಂದರೆಗೆ ಕಾರಣವಾಗಬಹುದು. ಇದು ಸರ್ಕಾರದ ನಿಯಮಗಳಿಗೆ ವಿರುದ್ಧವಾದದ್ದು ಎಂದು ನಾವು ನಂಬುತ್ತೇವೆ ಮತ್ತು ಇಂಥದ್ದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಶಿಕ್ಷಣ ಸಚಿವರು ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬೇಕೆಂದು ಮನವಿ ಮಾಡುತ್ತೇನೆ ಎಂದು ಪಾಲಕರು ಬರೆದುಕೊಂಡಿದ್ದಾರೆ.
ಇಡಿ ಬಲೆಯಲ್ಲಿ ಸುಂದರಿ! ನಟಿಯಾಗಿ ಬದಲಾದ ಮಾಜಿ ತೆರಿಗೆ ಅಧಿಕಾರಿಯ ಮಹಾ ವಂಚನೆ ಬಯಲು
ಸಂಸತ್ತಿನಲ್ಲಿ ಪಠಾಣ್ ಸಿನಿಮಾ ಯಶಸ್ಸನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ! ಶಾರುಖ್ ಅಭಿಮಾನಿಗಳ ಸಂಭ್ರಮ
ಮೊದಲ ರಾತ್ರಿಯ ಖಾಸಗಿ ವಿಡಿಯೋ ಹಂಚಿಕೊಂಡ ದಂಪತಿ! ತರಾಟೆಗೆ ತೆಗೆದುಕೊಂಡ ನೆಟ್ಟಿಗರು