ಬ್ಯಾಡಗಿ: ಆಕಸ್ಮಿಕ ಬೆಂಕಿ ತಗುಲಿ ಗುಡಿಸಲಿನಲ್ಲಿದ್ದ ವಯೋವೃದ್ಧ ಹಾಗೂ ಕುರಿ ಬೆಂಕಿಗೆ ಆಹುತಿಯಾದ ಘಟನೆ ತಾಲೂಕಿನ ಘಾಳಪೂಜಿ ಗ್ರಾಮದಲ್ಲಿ ಶನಿವಾರ ಬೆಳಗಿನ ಜಾವ ನಡೆದಿದೆ.
ಗ್ರಾಮದ ಸಣ್ಣತಮ್ಮಪ್ಪ ಬಸಪ್ಪ ಜಾಡರ (73) ಬೆಂಕಿಗೆ ಆಹುತಿಯಾದವರು.
ಘಟನೆ ಹಿನ್ನೆಲೆ: ಗ್ರಾಮದ ಹೊರಭಾಗದಲ್ಲಿ ಸಣ್ಣತಮ್ಮಪ್ಪ ಜಾನುವಾರು ಕೊಟ್ಟಿಗೆ ನಿರ್ವಿುಸಿಕೊಂಡಿದ್ದರು. ಶುಕ್ರವಾರ ರಾತ್ರಿ ಎಂದಿನಂತೆ ಊಟ ಮುಗಿಸಿಕೊಂಡು ಕೊಟ್ಟಿಗೆಗೆ ತೆರಳಿ ಮಲಗಿದ್ದಾರೆ. ಶನಿವಾರ ಬೆಳಗಿನ ಜಾವ ಮೂರು ಗಂಟೆಯ ಹೊತ್ತಿಗೆ ಕೊಟ್ಟಿಗೆಗೆ ಬೆಂಕಿ ಹೊತ್ತಿಕೊಂಡಿದ್ದು, ವಯೋವೃದ್ಧ ಹಾಗೂ ಕೊಟ್ಟಿಗೆಯಲ್ಲಿದ್ದ ಕುರಿಯೂ ಸುಟ್ಟು ಕರಕಲಾಗಿದೆ. ಬೆಳಗಾಗುತ್ತಿದ್ದಂತೆ ಕೊಟ್ಟಿಗೆಯಲ್ಲಿ ಹೊಗೆ ಬರುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು, ಬಂದು ನೋಡುವಷ್ಟರಲ್ಲಿ ವೃದ್ಧ ಹಾಗೂ ಕುರಿ ಬೆಂಕಿಗೆ ಆಹುತಿಯಾಗಿದ್ದರು.
ಈ ಕುರಿತು ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಬಸವರಾಜ ಶಿವಣ್ಣನವರ, ಎಸ್.ಆರ್.ಪಾಟೀಲ, ತಹಸೀಲ್ದಾರ್ ಎಸ್.ವಿ. ಪ್ರಸಾದ ಭೇಟಿ ನೀಡಿದರು.