More

    ಅಮೂಲ್ಯಾ ನಿಜವಾಗಿಯೂ ಹೇಳೋದಕ್ಕೆ ಹೊರಟಿದ್ದೇನು: ಸ್ವಇಚ್ಛಾ ಹೇಳಿಕೆಯಲ್ಲಿ ಸತ್ಯ ಬಯಲು

    ಬೆಂಗಳೂರು: ನಿನ್ನೆ ಫ್ರೀಡಂ ಪಾರ್ಕ್​ನಲ್ಲಿ ನಡೆಯುತ್ತಿದ್ದ ಸಿಎಎ ಮತ್ತು ಎನ್​ಆರ್​ಸಿ ವಿರೋಧಿ ಪ್ರತಿಭಟನೆಯಲ್ಲಿ ಪಾಕ್​ ಪರ ಘೋಷಣೆ ಕೂಗಿದ್ದ ಅಮೂಲ್ಯ ಲಿಯೋನಾ ತಾನು ಏನು ಹೇಳುವುದಕ್ಕೆ ಹೊರಟಿದ್ದೆ ಎನ್ನುವುದನ್ನು ಹೇಳಿದ್ದಾಳೆ. ಸ್ವ ಇಚ್ಛಾ ಹೇಳಿಕೆ ನೀಡಿರುವ ಅಮೂಲ್ಯ ತಾನು ಪಾಕಿಸ್ತಾನ್​ ಜಿಂದಾಬಾದ್​ ಘೋಷಣೆ ಆದ ಮೇಲೆ ಹಿಂದೂಸ್ತಾನ್​ ಜಿಂದಾಬಾದ್​ ಎನ್ನುವವಳಿದ್ದೆ ಎಂದು ಹೇಳಿಕೊಂಡಿದ್ದಾರೆ.

    ಅಮೂಲ್ಯ ಲಿಯೋನಾ ಹೇಳಿಕೆ ಹೀಗಿದೆ.
    – ಕುಮಾರಿ ಅಮೂಲ್ಯ ಲಿಯೋನ – D/O ವಾಜಿ. ಕಬ್ಬುಗುದ್ದೆ ಗ್ರಾಮ, ಕೊಪ್ಪ ತಾ. ಚಿಕ್ಕಮಗಳೂರು ಜಿಲ್ಲೆ
    ಅಮೂಲ್ಯ ಲಿಯೋನ ಆದ ನಾನು ಜಯನಗರದ ಎನ್ ಎಂ ಕೆ ಆರ್ ವಿ ಕಾಲೇಜ್ ನಲ್ಲಿ ಬಿ.ಎ ಎರಡನೇ ವರ್ಷದ ಪತ್ರಿಕೋದ್ಯಮ, ಇಂಗ್ಲಿಷ್ ಮತ್ತು ಮನಃಶಾಸ್ತ್ರದ ವ್ಯಾಸಾಂಗ ಮಾಡುತ್ತಿದ್ದೇನೆ. ಇದರ ಜೊತೆಗೆ ಕನ್ನಡ ಮತ್ತು ಇಂಗ್ಲೀಷ್ ಅನುವಾದಕಿಯಾಗಿ ಕಳೆದ ಒಂದು ವರ್ಷದಿಂದ ಕೆಲಸ ಮಾಡಿಕೊಂಡಿರುತ್ತೇನೆ. ಈಗ ನ್ಯೂಯಾರ್ಕ್ ಟೈಮ್ಸ್ ಲೇಖಕರಿಗೋಸ್ಕರ ಕೆಲಸ ಮಾಡುತ್ತಿದ್ದೇನೆ.

    ನಾನು ಸತತ ಎರಡು ತಿಂಗಳಿಂದ ಸಿಎಎ, ಎನ್.ಆರ್.ಸಿ ಹಾಗೂ ಎನ್.ಪಿ.ಆರ್ ವಿರೋಧಿ ಜೊತೆಗೆ ವಿದ್ಯಾರ್ಥಿಗಳ ಮೇಲೆ ನಡೆಯುವ ದೌರ್ಜನ್ಯದ ವಿರುದ್ದ ಹೋರಾಡುತ್ತಿದ್ದೇನೆ. ಈ ಮೊದಲು ಕೂಡ ಭೂಮಿ, ವಸತಿಗಾಗಿ ಹೋರಾಟ, ಲಂಚ ಮುಕ್ತ ಕರ್ನಾಟಕ ಹೋರಾಟ, ಹವಮಾನ ಬದಲಾವಣೆ ವಿರುದ್ದ ಹೋರಾಟ, ಶರಾವತಿ ವಿರುದ್ದ ಹೋರಾಟ ಇತರೆ ಸಾಮಾಜಿಕ ಹೋರಾಟಗಳಲ್ಲಿ ಭಾಗಿಯಾಗಿದ್ದೇನೆ. ಈ ವಿಚಾರದ ಬಗ್ಗೆ ಮಾತನಾಡಲು ನನಗೆ ಸಮಾಜದಲ್ಲಿ ಆಗುತ್ತಿರುವ ಘಟನೆಗಳು ಪ್ರೇರಣೆಯಾಗಿರುತ್ತದೆ. ಗೌರಿ ಲಂಕೇಶ್ ಹತ್ಯೆ. ಜಾಮಿಯಾ ಮಿಲಿಯಾ ಇಸ್ಲಾಮೀಯಾ ವಿಶ್ವವಿದ್ಯಾನಿಲಯ. ಅಲಿ ವಿಶ್ವವಿದ್ಯಾನಿಲಯ. ಜೆ.ಎನ್.ಯು ವಿವಿ, ಶೃಂಗೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಪೆಟ್ರೋಲ್ ಬಾಂಬ್ ಸಿಡಿಸುವ ಬೆದರಿಕೆ. ಮಂಗಳೂರಿನಲ್ಲಾದ ಗೋಲಿಬಾರ್. ಬೆಂಗಳೂರಿನಲ್ಲಿ ಇಬ್ಬರು ಕಾರ್ಮಿಕರು ಸೆಪ್ಟಿಕ್ ಟ್ಯಾಂಕ್ ಪ್ರವೇಶಿಸಿ ಸಾವನ್ನಪ್ಪಿದ ಘಟನೆ ಪ್ರೇರಣೆಯಾಗಿರುತ್ತದೆ. ಅದೇ ರೀತಿ ಸಮಾಜದಲ್ಲಿ ಬಡವರ ಮೇಲಾದ ದೌರ್ಜನ್ಯದ ವಿರುದ್ದ ನಾನು ಹೋರಾಟ ಪ್ರಾರಂಭಿಸಿದ್ದೇನೆ.

    ನಾನು ಸಿಎಎ ಎನ್.ಆರ್.ಸಿ ಮತ್ತು ಎನ್.ಪಿ.ಆರ್ ಮತ್ತೆ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ದ ಹಲವಾರು ವೇದಿಕೆಯಲ್ಲಿ ಮಾತನಾಡಿರುತ್ತೇನೆ. ಡಿ 15 ರಂದು ಜಾರಿಗೊಳಿಸಿದ್ದ ಸೆಕ್ಷನ್ 144 ಬೇಧಿಸಿ ಟೌನ್ ಹಾಲ್ ಮುಂದೆ ಪ್ರತಿಭಟಿಸಿದ್ದಕ್ಕೆ ನನ್ನನ್ನ ಡಿಟೇನ್ ಮಾಡಿದ್ರು. ಬಳಿಕ ವಿಧಾನಸೌಧದ ಮುಂದೆ ಕೇಂದ್ರ ಸರ್ಕಾರದ ವಿರುದ್ದ ಒಬ್ಬಂಟಿಯಾಗಿ ಪೋಸ್ಟರ್ ಹಿಡಿದಿದ್ದ ಕಾರಣ ಪೊಲೀಸರು ನನ್ನನ್ನ ಬಂಧಿಸಿರುತ್ತಾರೆ.

    ನಾನು ಫ್ರೀಡಂ ಪಾರ್ಕ್​ನಲ್ಲಿ ಸರ್ಕಾರಿ ಕಾಲೇಜ್​ನಲ್ಲಿ (ಸೆಂಟ್ರಲ್) ಮತ್ತು ಹೆಚ್.ಎಂ.ಟಿ ಲೇಔಟ್ ಶಿವಾಜಿನಗರ ಚೌಕದಲ್ಲಿ ವಿಜಯನಗರ ಚೌಕದಲ್ಲಿ ಮೇಲ್ಕಂಡ ಎನ್.ಆರ್.ಸಿ ವಿರೋಧಿಸಿ ಭಾಷಣ ನೀಡಿರುತ್ತೇನೆ.
    ಇಂದು ನನ್ನ ಗೆಳತಿ ಹಾಗೂ ಹೋರಾಟಗಾರ್ತಿ ತೆರೆಸಾ ಫ್ರೀಡಂ ಪಾರ್ಕ್​ನಲ್ಲಿ ಸಿಎಎ ಹಾಗೂ ಎನ್​ಆರ್​ಸಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ಆಗುತ್ತಾ ಎಂದು ಕೇಳಿದಾಗ. ನಾನು ನನ್ನ ಸಮ್ಮತಿಯನ್ನ ನೀಡಿರುತ್ತೇನೆ. ಇದರ ನಂತರ ಸೈಯದ್ ಆರ್ಯನ್ ಎಂಬುವರು ನನ್ನನ್ನು ಈ ಪ್ರತಿಭಟನೆ ಉದ್ದೇಶಿಸಿ ಮಾತನಾಡಲು ಆಹ್ವಾನಿಸಿರುತ್ತಾರೆ. ಇದರ ನಂತರ ನಾನು ಇಂದು ಸಂಜೆ 4 ಗಂಟೆಗೆ ಫ್ರೀಡಂ ಪಾರ್ಕ್ ಗೆ ತಲುಪಿರುತ್ತೇನೆ ಪ್ರತಿಭಟನೆ ಜಾರಿಯಲ್ಲಿದ್ದು ನನಗೆ ಮಾತನಾಡುವ ಸರದಿಯನ್ನ ಆಯೋಜಕರು ನೀಡಿದರು. ಕಾರ್ಯಕ್ರಮದ ಮುಖ್ಯ ನಿರೂಪಕರು, ಮುಖ್ಯ ಅತಿಥಿ ಅಸಾದುದ್ದೀನ್ ಬಂದ ನಂತರ ಮಾತನಾಡಲು ಅವಕಾಶ ನೀಡಿದರು.

    ನಾನು ನನ್ನ ಭಾಷಣವನ್ನ “ಪಾಕಿಸ್ತಾನ ಜಿಂದಾಬಾದ್” ಎಂದು ಮೂರು ಬಾರಿ ಹೇಳಿ “ಹಿಂದೂಸ್ತಾನ್ ಜಿಂದಾಬಾದ್” ಎಂದು ಮೂರು ಬಾರಿ ಹೇಳಿ ಭಾಷಣ ಆರಂಭಿಸಿದೆ. ಇದರಿಂದ ಆಕ್ರೋಶಗೊಂಡ ಆಯೋಜಕರು ಮತ್ತು ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರು ನನ್ನಿಂದ ಮೈಕ್ ಕಸಿಯುವ ಪ್ರಯತ್ನ ಮಾಡಿದರು. ನಾನು ಎಷ್ಟೇ ವಿನಯದಿಂದ ಮಾತು ಮುಗಿಸಲು ಅವಕಾಶ ನೀಡಿ ಎಂದರೂ ನನಗೆ ಮಾತನಾಡಲು ಬಿಡಲಿಲ್ಲ. ಇದರ ನಂತರ ನಾನು ಸಭೆಯನ್ನ ಉದ್ದೇಶಿಸಿ ಮೈಕ್ ಇಲ್ಲದೆ “ನಾನೀಗ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿದೆ. ಜೊತೆಯಲ್ಲಿ ಹಿಂದೂಸ್ತಾನ್ ಜಿಂದಾಬಾದ್ ಎಂದು ಸಹ ಹೇಳಿದೆ. ಇದರ ನಡುವೆ ಇರುವ ವ್ಯತ್ಯಾಸವೇನೆಂದರೆ” ಇಷ್ಟು ಹೇಳುವಲ್ಲಿ ಆಯೋಜಕರು ಮತ್ತು ಪೊಲೀಸರು ಹಾಗೂ ಅಸಾದುದ್ದೀನ್ ಓವೈಸಿಯವರು ನಾನು ಇಂತ ಮಾತನ್ನ ಕೇಳಲು ಸಾಧ್ಯವಿಲ್ಲವೆಂದು ಹೇಳಿ ನನ್ನನ್ನು ಸಭೆಯಿಂದ ಅಮಾನವೀಯವಾಗಿ ಕಳುಹಿಸಿದ್ದಾರೆ.

    ಈ ನಡುವೆ ನಾನು ” ದಯವಿಟ್ಟು ನನ್ನ ಮಾತನ್ನ ಮುಗಿಸಲು ಅವಕಾಶ ಮಾಡಿಕೊಡಿ ಎಂದು ನಾನು ಎಲ್ಲರಲ್ಲೂ ಮನವಿ ಮಾಡಿಕೊಂಡೆ”
    ಇಂತಿ ಅಮೂಲ್ಯ ಲಿಯೋನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts