ಧಾರವಾಡ: ಆಧುನಿಕ ಯುಗದಲ್ಲಿ ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚಿನ ಮಾನ್ಯತೆ ಇದೆ. ಬಡ ವಿದ್ಯಾರ್ಥಿಗಳಿಗಂತೂ ಐಟಿಐ ಉತ್ತಮ ಕೋರ್ಸ್. ತರಬೇತಿ ನಂತರ ನೇರವಾಗಿ ಕೈಗಾರಿಕೆಗಳಲ್ಲಿ ಉದ್ಯೋಗ ಪಡೆದು ಕುಟುಂಬದ ಜವಾಬ್ದಾರಿಗಳಿಗೆ ನೆರವಾಗಬೇಕು ಎಂದು ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಐ.ಟಿ.ಐ ಕಾಲೇಜ್ ಪ್ರಾಚಾರ್ಯ ಮಹಾವೀರ ಉಪಾಧ್ಯೆ ಹೇಳಿದರು.
ವಿದ್ಯಾಗಿರಿಯ ಜೆಎಸ್ಎಸ್ ಸಂಸ್ಥೆಯ ಐಟಿಐ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಐ.ಟಿ.ಐ ಪಾಸಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ತರಗತಿಯ ಪಾಠ ವಿದ್ಯಾರ್ಥಿಯ ಕೌಶಲ ಹೆಚ್ಚಿಸಲು ಅಸಾಧ್ಯ. ಕಾಲೇಜುಗಳು ಸ್ಥಳೀಯ ಕಂಪನಿಗಳ ಜೊತೆ ಉದ್ಯೋಗ ಹಾಗೂ ತರಬೇತಿಗಾಗಿ ಒಡಂಬಡಿಕೆ ಮಾಡಿಕೊಂಡರೆ ವಿದ್ಯಾರ್ಥಿಗಳನ್ನು ಆಧುನಿಕ ತರಬೇತಿಗೆ ಅಣಿಗೊಳಿಸಬಹುದು. ಇದರಿಂದ ವಿದ್ಯಾರ್ಥಿಗಳಿಗೆ ನೂತನ ತಂತ್ರಜ್ಞಾನದ ಪರಿಚಯವಾಗುವುದಲ್ಲದೆ, ನೇರವಾಗಿ ಉದ್ಯೋಗ ಪಡೆಯುತ್ತಾರೆ ಎಂದರು.
ವಿನಾಯಕ ಗವಳಿ, ಬಿ.ಎ. ತಡಕೋಡ ಹಾಗೂ ಸಿಬ್ಬಂದಿ ಇದ್ದರು. ಮಂಜುನಾಥ ಚಟ್ಟೇರ ಪ್ರಾರ್ಥಿಸಿದರು. ಸುಕನ್ಯಾ ಗುಮಗೋಳಮಠ ವಂದಿಸಿದರು.