ನವದೆಹಲಿ: ಈ ಶತಮಾನದ ಅತ್ಯಂತ ಬಿರುಸಾದ ಚಂಡಮಾರುತ ಎಂದೇ ಕುಖ್ಯಾತವಾಗಿರುವ ಅಂಫಾನ್ ಇಂದು ಮಧ್ಯಾಹ್ನ 2.30ಕ್ಕೆ ಭಾರತದ ಪೂರ್ವ ಭಾಗದ ಮತ್ತು ಬಾಂಗ್ಲಾದೇಶದ ಕರಾವಳಿಗೆ ಅಪ್ಪಳಿಸಿದೆ.
ಪರಿಣಾಮವಾಗಿ ಭಾರಿ ಪ್ರಮಾಣದಲ್ಲಿ ಮಳೆ ಬೀಳುತ್ತಿದೆ. ಅಪಾರ ವೇಗದಲ್ಲಿ ಗಾಳಿ ಬೀಸುತ್ತಿದೆ. ಚಂಡಮಾರುತ ಅಪ್ಪಳಿಸಿದ ಸಂದರ್ಭದಲ್ಲಿ ಅದರ ವೇಗ ಗಂಟೆಗೆ 120 ಕಿಮೀನಷ್ಟಿತ್ತು. ಸಮುದ್ರದ ಅಲೆಗಳು ಸುಮಾರು 15 ಅಡಿಯಷ್ಟು ಎತ್ತರವಿದ್ದವು ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಇದನ್ನೂ ಓದಿ ಪುರುಷರ ವಾರ್ಡ್ನಲ್ಲಿ ಒಳ ಉಡುಪು ಕಾಣುವಂತೆ ಪಾರದರ್ಶಕ ಪಿಪಿಇ ಗೌನ್ ತೊಟ್ಟ ನರ್ಸ್…!
ಈ ಚಂಡಮಾರುತಕ್ಕೆ ಮೊದಲ ಬಲಿ ಬಾಂಗ್ಲಾದೇಶದಲ್ಲಾಗಿದೆ. ಅಲ್ಲಿನ ಗ್ರಾಮಸ್ಥರನ್ನು ತೆರವುಗೊಳಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕೆಲಸದಲ್ಲಿ ನಿರತವಾಗಿದ್ದ ದೋಣಿ ಮುಳುಗಿದ್ದು ಅದರಲ್ಲಿದ್ದ ನಾಲ್ವರು ‘ರೆಡ್ ಕ್ರೆಸೆಂಟ್’ ಸ್ವಯಂಸೇವಕರ ಪೈಕಿ ಒಬ್ಬ ಮೃತಪಟ್ಟಿದ್ದಾನೆ.
ಬಾಂಗ್ಲಾದೇಶ, ಒಡಿಶಾ, ಪಶ್ಚಿಮ ಬಂಗಾಳ ಸೇರಿದಂತೆ ಕರಾವಳಿಯುದ್ದಕ್ಕೂ ಲಕ್ಷಾಂತರ ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಭಾರತೀಯ ನೌಕಾಪಡೆ ಸಂಭಾವ್ಯ ಅಪಾಯ ಎದುರಿಸಲು ಸರ್ವಸನ್ನದ್ಧವಾಗಿದೆ.