ಕೋಲ್ಕತಾ: ಹಿಂದೊಮ್ಮೆ ಸೋನಾರ್ ಬಾಂಗ್ಲಾ ಎಂದೇ ಪ್ರಸಿದ್ಧಿ ಪಡೆದಿದ್ದ ಪಶ್ಚಿಮ ಬಂಗಾಳ ಇಂದು ಭ್ರಷ್ಟಾಚಾರದ ಕೂಪವಾಗಿದೆ. ಹಿಂಸಾಚಾರವನ್ನು ತೊಲಗಿಸುವ ಸಲುವಾಗಿಯೇ ಕಮ್ಯೂನಿಸ್ಟ್ ಸರ್ಕಾರವನ್ನು ಹೊಡೆದೋಡಿಸಿದ್ದ ಬಂಗಾಳ ವಾಸಿಗಳು ಇದೀಗ ತೃಣಮೂಲ ಕಾಂಗ್ರೆಸ್ನ್ನು ಅಧಿಕಾರಕ್ಕೆ ತಂದು ಹಿಂದಿನ ಸರ್ಕಾರವೇ ಇದ್ದರೆ ಚೆನ್ನಾಗಿತ್ತು ಎಂದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಈ ಸರ್ಕಾರದಿಂದ ಬೇಸತ್ತಿರುವ ಜನರೇ ನಿಮಗೆ ಬುದ್ಧಿ ಕಲಿಸಲಿದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ತಿರುಗೇಟು ನೀಡಿದರು.
ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನವದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಜೆಪಿ ಕಾರ್ಯಕರ್ತರೊಂದಿಗೆ ಷಾ ಮಾತನಾಡಿದರು. ಇದರ ನೇರಪ್ರಸಾರ ಮಾಡಲಾಗಿದ್ದು, ಜನರಿಗೂ ಇದರ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು.
ಬಿಜೆಪಿ ವಿರುದ್ಧ ಕೆಸರೆರೆಚಾಟ ಮಾಡುವುದರಲ್ಲಿಯೇ ನೀವು ಕಾಲ ಕಳೆಯುತ್ತಿದ್ದೀರಿ. ನೀವು ಕೆಸರು ಎಷ್ಟು ಎರೆಚಿದರೂ ಅಷ್ಟೇ ಸುಂದರವಾಗಿ ಕಮಲ ಎದ್ದು ನಿಲ್ಲಲಿದೆ. ನಿಮ್ಮ ಯಾವುದೇ ಟೀಕೆಗಳಿಗೂ ನಾವು ಕಿವಿಗೊಡುವುದಿಲ್ಲ ಎಂದು ಹೇಳಿದ ಷಾ, ಈ ಬಾರಿ ಬಿಜೆಪಿಯೇ ಪಶ್ಚಿಮ ಬಂಗಾಳದಲ್ಲಿ ಗೆದ್ದು ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕರೊನಾ ಹೊತ್ತಲ್ಲಿ ಜರ್ಮನಿಗೆ ಹೋಗಿ ಬಂತು ಕನ್ನಡದ ಈ ಸೈಲೆಂಟ್ ಕಿರುಚಿತ್ರ!
ದೀದೀ ಸರ್ಕಾರ ಭ್ರಷ್ಟಾಚಾರದ ಪರಮಾವಧಿಗೆ ಇಳಿದಿರುವುದನ್ನು ಜನತೆ ನೋಡುತ್ತಿದೆ. ಯಾವುದರಲ್ಲಿಯೂ ಭ್ರಷ್ಟಚಾರ, ಮೋಸ, ವಂಚನೆ ಮಾಡಿದರೆ ಸಹಿಸಬಹುದಿತ್ತೇನೋ, ಆದರೆ ಕರೊನಾದಲ್ಲಿಯೂ ಭ್ರಷ್ಟಾಚಾರಕ್ಕೆ ಇಳಿದಿರುವುದನ್ನು ಜನರು ಎಂದಿಗೂ ಸಹಿಸುವುದಿಲ್ಲ. ಸೋನಾರ್ ಬಾಂಗ್ಲಾವಾಗಿದ್ದ ಬಂಗಾಳವನ್ನು ಇಷ್ಟು ಹೀನಾಯ ಸ್ಥಿತಿಗೆ ತಂದಿರುವುದು ತುಂಬಾ ನೋವಿನ ಸಂಗತಿ ಎಂದು ಹೇಳಿದರು.
ವಂದೇ ಮಾತರಂ ಮಾತೃಭೂಮಿ, ರಾಮಕೃಷ್ಣ, ವಿವೇಕಾನಂದರಂಥ ಮಹಾನುಭಾವರವನ್ನು ಕಂಡಿರುವ ಬಂಗಾಳವನ್ನು ಅಧಃಪತನದಲ್ಲಿ ಕೊಂಡೊಯ್ಯುವಲ್ಲಿ ದೀದೀ ಸರ್ಕಾರ ಮುಂದಾಗಿದೆ. ಶಾಂತಿಯ ಮಂತ್ರದ ಪಠಣವಾಗುತ್ತಿದ್ದ ರಾಜ್ಯದಲ್ಲೀಗ ಅರಾಜಕತೆ ತಾಂಡವಾಡುತ್ತಿದೆ. ಇಂಥ ಸರ್ಕಾರ ಜನರಿಗೆ ಬೇಕೇ ಎಂದು ಪ್ರಶ್ನಿಸಿದರು.
ವಲಸೆ ಕಾರ್ಮಿಕರನ್ನು ಅವರ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಶ್ರಮಿಕ್ ರೈಲು ಎಂಬ ಹೆಸರಿನಲ್ಲಿ ಕೇಂದ್ರ ಸರ್ಕಾರ ರೈಲು ಯೋಜನೆಯನ್ನು ಶುರು ಮಾಡಿದರೆ, ಅದಕ್ಕೆ ದೀದೀ ಸರ್ಕಾರ ಕರೊನಾ ಎಕ್ಸ್ಪ್ರೆಸ್ ಎಂದು ಹೆಸರು ಕೊಟ್ಟಿತು. ಇಂಥ ಕೀಳು ಮಟ್ಟದ ಅಭಿರುಚಿಯನ್ನು ಯಾರು ತಾನೇ ಸಹಿಸುತ್ತಾರೆ? ಈ ರೀತಿ ಹೆಸರು ಹೇಳುವ ಮೂಲಕ ಕಾರ್ಮಿಕರನ್ನು ಅವಮಾನ ಮಾಡಿರುವುದು ಎಂದಿಗೂ ಸಹಿಸಲು ಸಾಧ್ಯವಿಲ್ಲ ಎಂದು ಅಮಿತ್ ಷಾ ಕಿಡಿ ಕಾರಿದರು.
ಇದನ್ನೂ ಓದಿ: ಮುಂದುವರೆದಿದೆ ಆನ್ಲೈನ್ ತರಗತಿ ಅನಾಹುತ: ಸ್ಮಾರ್ಟ್ಫೋನ್ ಇಲ್ಲವೆಂದು ವಿದ್ಯಾರ್ಥಿನಿ ಆತ್ಮಹತ್ಯೆ!
ಹಿಂದೆ ಇದ್ದ ಕಮ್ಯೂನಿಸ್ಟ್ ಸರ್ಕಾರ ಹಾಗೂ ಈಗಿರುವ ತೃಣಮೂಲ ಕಾಂಗ್ರೆಸ್ ಸರ್ಕಾರದಿಂದ ಬಂಗಾಳಕ್ಕೆ ಆಗಿರುವ ಹೀನಾಯ ಸ್ಥಿತಿಯಿಂದ ಮೇಲೆ ಬಂದು ಸೋನಾರ ಬಾಂಗ್ಲಾದ ವೈಭವವನ್ನು ಮರುಕಳಿಸಬೇಕೆಂದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಅಮಿತ್ ಷಾ, ಬಿಹಾರ್. ಮಧ್ಯಪ್ರದೇಶ, ಛತ್ತೀಸಗಢ, ರಾಜಸ್ಥಾನದ ಉದಾಹರಣೆಗಳನ್ನು ನೀಡಿದರು. ಎಲ್ಲಾ ರೀತಿಯಲ್ಲಿಯೂ ಅತ್ಯಂತ ಹಿಂದುಳಿದಿದ್ದ ಉತ್ತರ ಪ್ರದೇಶ ರಾಜ್ಯವು ಯೋಗಿ ಆದಿತ್ಯನಾಥ ಅವರ ಸರ್ಕಾರದಿಂದ ಮೂರು ವರ್ಷಗಳಲ್ಲೇ ವಿಕಾಸದ ಹಾದಿ ಹಿಡಿದಿರುವ ಬಗ್ಗೆಯೂ ಉದಾಹರಣೆ ನೀಡಿದ ಷಾ ಅವರು, ಇಂಥ ವಿಕಾಸ ಎಲ್ಲಾ ರಾಜ್ಯಗಳಲ್ಲಿಯೂ ಆಗಬೇಕೆಂದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು.
ಕರೊನಾ ವೈರಸ್ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಕರೆಕೊಟ್ಟಿದ್ದ ಜನತಾ ಕರ್ಫ್ಯೂ, ದೀಪ ಬೆಳಗುವಿಕೆ, ಚಪ್ಪಾಳೆ ತಟ್ಟುವಿಕೆ ಸಂದರ್ಭದಲ್ಲಿ ದೇಶದ 130 ಕೋಟಿ ಜನರು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದೇ ಮೋದಿ ಅವರ ನಾಯಕತ್ವವನ್ನು ಸಾರುತ್ತದೆ. ಯಾವ ಪೊಲೀಸರ ಬೆಂಬಲವೂ ಇಲ್ಲದೇ ಇಡೀ ದೇಶಕ್ಕೆ ದೇಶವೇ ಸ್ವಯಂ ಪ್ರೇರಿತವಾಗಿ ಕರ್ಫ್ಯೂ ವಿಧಿಸಿಕೊಂಡದ್ದು ಮೋದಿ ಅವರ ಮೇಲೆ ಜನರು ಇಟ್ಟಿರುವ ವಿಶ್ವಾಸವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಬಂಗಾಳದ ಜನರು ಕುಡ ಮೋದಿ ಅವರ ಮೇಲೆ ನಂಬಿಕೆ ಇಟ್ಟು, ಪಶ್ಚಿಮ ಬಂಗಾಳಕ್ಕೆ ಕೂಡ ಅವರು ನೀಡಿರುವ ಕೊಡುಗೆಗಳನ್ನು ಸ್ಮರಿಸಿ, ಬಿಜೆಪಿಗೆ ಒಂದು ಅವಕಾಶ ನೀಡಬೇಕು ಎಂದು ಜನರಲ್ಲಿ ಮನವಿ ಮಾಡಿಕೊಂಡರು.
ಇದನ್ನೂ ಓದಿ: ಸಿನಿಮಾ ರಿಲೀಸ್ ಮಾಡೋಕೆ ರೆಡಿಯಾಗಿ!; ಚಿತ್ರ ಪ್ರದರ್ಶನಕ್ಕೆ ಕೇಂದ್ರದಿಂದ ಸಿಕ್ತು ಗ್ರೀನ್ ಸಿಗ್ನಲ್!?
ಕಿಸಾನ್ ಸಮ್ಮಾನ್ ನಿಧಿ, ಮಹಿಳಾ ಜನ್ ಧನ್ ಖಾತಾ. ಉಜ್ವಲಾ ಇತ್ಯಾದಿ ಯೋಜನೆಗಳ ಬಗ್ಗೆ ಅಂಕಿಅಂಶಗಳನ್ನು ನೀಡಿದ ಅಮಿತ್ ಷಾ, ಇಲ್ಲಿಯವರೆಗೆ ಇದರಿಂದ ಪ್ರಯೋಜನ ಪಡೆದಿರುವ ಕೋಟ್ಯಂತರ ಮಂದಿಯ ವಿವರಣೆ ನೀಡಿದರು. ಕೇಂದ್ರ ಸರ್ಕಾರ ಯಾವುದೇ ರಾಜ್ಯಕ್ಕೂ ಮೋಸವಾಗಲೀ, ಪಕ್ಷಪಾತವಾಗಲೀ ಮಾಡಿಲ್ಲ ಎಂದು ತಿಳಿಸಿದ ಅವರು, ಮಮತಾ ಬ್ಯಾನರ್ಜಿಯ ಆರೋಪಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಫಲಾನುಭವಿಗಳ ಹೆಸರು, ಅವರ ಮಾಹಿತಿಯನ್ನು ನೀಡದ ಬ್ಯಾನರ್ಜಿ ಸುಖಾಸುಮ್ಮನೆ ಕೇಂದ್ರ ಸರ್ಕಾರವನ್ನು ಆರೋಪಿಸುತ್ತಿದ್ದಾರೆ ಎಂದು ಹರಿಹಾಯ್ದ ಷಾ, ಮೊದಲು ಫಲಾನುಭವಿಗಳ ಮಾಹಿತಿ ನೀಡುವಂತೆ ಮುಖ್ಯಮಂತ್ರಿಗೆ ಸೂಚಿಸಿದರು.
ಇಲ್ಲಿಯವರೆಗೆ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳಕ್ಕೆ ಬಿಡುಗಡೆ ಮಾಡಿರುವ ಹಣ ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದ ಷಾ, ಮೊದಲು ಜನರ ಅನುಕೂಲಕ್ಕೆ ಹಣವನ್ನು ಮೀಸಲು ಇಡುವಂತೆ ಹೇಳಿದರು.