ನವದೆಹಲಿ: ಶನಿವಾರದಂದು ಚತ್ತೀಸ್ಗಢದ ಬಿಜಾಪುರ ಜಿಲ್ಲೆಯ ಸಿಲಗುರ್ ಅರಣ್ಯ ವಲಯದಲ್ಲಿ 22 ಯೋಧರು ನಕ್ಸಲರ ದಾಳಿಗೆ ಬಲಿಯಾದ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ನಕ್ಸಲರ ವಿರುದ್ಧ ದೊಡ್ಡ ರೀತಿಯಲ್ಲಿ ಸೇಡು ತೀರಿಸಿಕೊಳ್ಳಲು ಸಂಚು ಹಾಕಲು ಆರಂಭಿಸಿದ್ದಾರೆಂದು ಹೇಳಲಾಗಿದೆ. ಅಸ್ಸಾಂ ಪ್ರವಾಸದಲ್ಲಿದ್ದ ಅವರು ಎಲ್ಲ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ದೆಹಲಿಗೆ ವಾಪಾಸಾಗಿದ್ದು, ಮುಂದಿನ ಕ್ರಮದ ಬಗ್ಗೆ ಸಿಆರ್ಪಿಎಫ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.
ಅಸ್ಸಾಂನಲ್ಲಿ ಚುನಾವಣೆ ಇರುವ ಪ್ರಯುಕ್ತ ಅಮಿತ್ ಷಾ ಅವರು ಅಲ್ಲಿ ಚುನಾವಣಾ ಪ್ರಚಾರದಲ್ಲಿದ್ದರು. ಆದರೆ ಶನಿವಾರ ನಡೆದ ದಾಳಿ ವಿಚಾರ ತಿಳಿಯುತ್ತಿದ್ದಂತೆ ಎಲ್ಲ ಕೆಲಸಗಳನ್ನು ಮೊಟಕುಗೊಳಿಸಿ ರಾಷ್ಟ್ರ ರಾಜಧಾನಿಗೆ ಮರಳಿದ್ದಾರೆ. ಇಲ್ಲಿ ಸಿಆರ್ಪಿಎಫ್ನ ಹಿರಿಯ ಅಧಿಕಾರಿಗಳು ಮತ್ತು ಗೃಹ ಇಲಾಖೆಯ ಕೆಲ ಪ್ರಮುಖ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ನಮ್ಮ ಯೋಧರ ಬಲಿದಾನವನ್ನು ವ್ಯರ್ಥವಾಗಲು ಬಿಡಲಾಗದು. ನಕ್ಸಲರಿಗೆ ತಕ್ಕ ಪಾಠ ಕಲಿಸಬೇಕು ಎಂದು ಸಭೆಯಲ್ಲಿ ಚರ್ಚಿಸಿದ್ದಾರೆ ಎನ್ನಲಾಗಿದೆ.
ಸಿಲಗುರ್ ಅರಣ್ಯ ವಲಯದಲ್ಲಿ ಸಿಆರ್ಪಿಫ್ ಯೋಧರು ಹಾಗೂ ಮಾವೋವಾದಿಗಳ ನಡುವೆ ಭೀಕರ ಗುಂಡಿನ ಕಾಳಗ ನಡೆದಿತ್ತು. ಅದರಲ್ಲಿ 22 ಯೋಧರು ಹುತಾತ್ಮರಾಗಿರುವುದು ಖಚಿತವಾಗಿದೆ. ಇನ್ನೂ 8 ಯೋಧರು ಕಾಣೆಯಾಗಿದ್ದು, ಅವರಿಗಾಗಿ ಕಾರ್ಯಾಚರಣೆ ಮುಂದುವರೆದಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಭೀಕರ ದಾಳಿಯಲ್ಲಿ 5ಕ್ಕಿಂತ ಹೆಚ್ಚು ಮಾವೋವಾದಿಗಳೂ ಹತರಾಗಿದ್ದಾರೆ. (ಏಜೆನ್ಸೀಸ್)
#WATCH | Delhi: Home Minister Amit Shah taking top-level meeting with senior officers on Bijapur encounter at his residence.
Home Secretary Ajay Bhalla, Director IB Arvinda Kumar and senior CRPF officers are attending the meeting. pic.twitter.com/3opzROJC7g
— ANI (@ANI) April 4, 2021