ದೊಡ್ಡಬಳ್ಳಾಪುರ ತಾಲೂಕು ಮಧುರೆ ಹೋಬಳಿಯ ನಾಡಕಚೇರಿ, ಕನಸವಾಡಿ ಗ್ರಾಪಂಕಚೇರಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಶಿಷ್ಟಾಚಾರದಂತೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸದೇ ಅಗೌರವ ತೋರಲಾಗಿದೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.
ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಏ .14 ರಂದು ಎಲ್ಲ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಅಂಬೇಡ್ಕರ್ ಜಯಂತಿ ಆಚರಿಸಬೇಕೆಂಬ ಸರ್ಕಾರದ ಸುತ್ತೋಲೆ ಇದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿವ ಮೂಲಕ ಸಂವಿಧಾನ ಶಿಲ್ಪಿಗೆ ಅಗೌರವ ತೋರಿಸಿದ್ದಾರೆ ಎಂದು ಹೋಬಳಿಯ ದಲಿತ ಮುಖಂಡ ರಮೇಶ್ ಆರೋಪಿಸಿದ್ದಾರೆ.
ನೆಲದ ಮೇಲಿಟ್ಟು ಅಸಡ್ಡೆ: ನಾಡಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡಿದಿರುವ ಬಗ್ಗೆ ಈ ಭಾಗದ ದಲಿತ ಮುಖಂಡರು ಪ್ರಶ್ನಿಸಿದ ನಂತರ ಅಧಿಕಾರಿಗಳು ತರಾತುರಿಯಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ನೆಲದ ಮೇಲೆಯೇ ಇಟ್ಟು ಪೂಜಿಸಿದ್ದಾರೆ. ಅಂಬೇಡ್ಕರ್ ಭಾವಚಿತ್ರವನ್ನು ನೆಲದ ಮೇಲೆ ಇಟ್ಟು ಕಾಟಾಚಾರಕ್ಕೆ ಜಯಂತಿ ಆಚರಿಸಿದ್ದಾರೆ.ಇದು ಅಧಿಕಾರಿಗಳ ಅಸಡ್ಡೆಗೆ ಸಾಕ್ಷಿಯಾಗಿದೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಗಮನ ಸೆಳೆಯಲು ನಾಡಕಚೇರಿಯ ಉಪ ತಹಸೀಲ್ದಾರ್ ಅವರನ್ನು ಸಂಪರ್ಕಿಸಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ ಎನ್ನಲಾಗಿದೆ. ನಾಡಕಚೇರಿ ಗ್ರಾಮ ಪಂಚಾಯತಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ಕೊಟ್ಟಿದ್ದು ಯಾವುದೇ ಕಚೇರಿಯಲ್ಲೂ ಅಂಬೇಡ್ಕರ್ ಜಯಂತಿ ಆಚರಿಸದೇ ಕಡೆಗಣನೆ ಮಾಡಲಾಗಿದೆ ಎಂದು ಗ್ರಾಪಂ ಸದಸ್ಯ ಕೆ.ಶ್ರೀನಿವಾಸ್ ದೂರಿದ್ದಾರೆ.