ಆಲೂರು: ತಾಲೂಕಿನ ಕೆ.ಹೊಸಕೋಟೆ, ಪಾಳ್ಯ ಹೋಬಳಿ ವ್ಯಾಪ್ತಿಯ ಕಾಫಿ ಎಸ್ಟೇಟ್ಗಳಲ್ಲಿದ್ದ 35 ವಲಸೆ ಕಾರ್ಮಿಕರನ್ನು ತಾಲೂಕು ಆಡಳಿತದ ವತಿಯಿಂದ ತಮ್ಮ ಊರುಗಳಿಗೆ ಕಳುಹಿಸಿಕೊಡಲಾಯಿತು.
ಸೇವಾಸಿಂಧು ಮೂಲಕ ಪಾಸ್ ಪಡೆದ 35 ವಲಸೆ ಕಾರ್ಮಿಕರಿಗೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆರೋಗ್ಯ ತಪಾಸಣೆ ನಡೆಸಿ ಕೆಎಸ್ಆರ್ಟಿಸಿ ಬಸ್ ಮೂಲಕ ಕಳುಹಿಸಿಕೊಡಲಾಯಿತು.
ಶಾಸಕ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಕಾರ್ಮಿಕರ ಸೇವೆ ಎಲ್ಲ ವರ್ಗಗಳಿಗೂ ಅತ್ಯವಶ್ಯಕವಾಗಿದ್ದು, ಸೋಂಕು ನಿವಾರಣೆ ನಂತರ ತಾವೆಲ್ಲರೂ ಪುನಾ ನಮ್ಮ ರಾಜ್ಯಕ್ಕೆ ಬಂದು ತಮ್ಮ ಕೆಲಸಕಾರ್ಯಗಳಲ್ಲಿ ತೊಡಗಿಕೊಂಡು ಜೀವನ ನಡೆಸಿರಿ ಎಂದು ಶುಭ ಹಾರೈಸಿ ಕಳುಹಿಸಿದರು. ತಹಸೀಲ್ದಾರ್ ಶಿರೀನ್ ತಾಜ್ ಮಾತನಾಡಿದರು. ತಾಪಂ ಇಒ ಸತೀಶ್, ಕಂದಾಯ ಇಲಾಖೆ ಸಿಬ್ಬಂದಿ ಅಂಜುಮ್ ಸೇನಾ ಬೇಗಂ, ಶುಭಾ ಹಾಜರಿದ್ದರು.