More

    ನಿವೃತ್ತ ಸೈನಿಕರಿಗೆ ಜಾಗ ಮಂಜೂರು ಮಾಡಿ

    ಗೋಣಿಕೊಪ್ಪ: ನಿವೃತ್ತ ಸೈನಿಕರಿಗೆ ಜಾಗ ಮಂಜೂರಾತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ವತಿಯಿಂದ ಪೊನ್ನಂಪೇಟೆ ತಾಲೂಕು ತಹಸೀಲ್ದಾರ್ ಅವರನ್ನು ಶುಕ್ರವಾರ ಒತ್ತಾಯಿಸಲಾಯಿತು.

    ಪೊನ್ನಂಪೇಟೆ ಆಡಳಿತ ಕಚೇರಿಯಲ್ಲಿ ತಹಶೀಲ್ದಾರ್ ಪ್ರಶಾಂತ್ ಅವರಿಗೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎ.ಎಸ್.ಕಟ್ಟಿ ಮಂದಯ್ಯ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

    ಕಳೆದ 10 ವರ್ಷಗಳಿಂದ ನಿವೃತ್ತ ಸೈನಿಕ ಕಾಳಿಮಾಡ ಬಿ. ಕುಶಾಲಪ್ಪ ಅವರು ಬೀರುಗ ಗ್ರಾಮದಲ್ಲಿರುವ 1/1 ಸರ್ವೇ ನಂಬರಿನ 3 ಎಕರೆ 30 ಸೆಂಟ್ ಜಾಗದ ಕಾಫಿ ತೋಟವನ್ನು ಹೆಸರಿಗೆ ನೋಂದಾಯಿಸುವಂತೆ ಅರ್ಜಿ ಸಲ್ಲಿಸಿದ್ದರೂ, ಅರ್ಜಿ ವಿಲೇವಾರಿಗೊಂಡಿಲ್ಲ. ಇಲಾಖೆಯ ಸಿಬ್ಬಂದಿ ಈ ವಿಚಾರವಾಗಿ ಸತಾಯಿಸುತ್ತಿದ್ದಾರೆ. ಜಾಗವನ್ನು ತಕ್ಷಣ ಮಂಜೂರು ಮಾಡಿಸಿ ನಿವೃತ್ತ ಸೈನಿಕರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಕಚೇರಿಯಲ್ಲಿರುವ ಕಡತವನ್ನು ವಿಲೇವಾರಿ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿತು.

    ಈ ವಿಚಾರಕ್ಕೆ ಸಂಬಂಧಿಸಿದಂತೆ ವಿರಾಜಪೇಟೆ ತಹಸೀಲ್ದಾರ್ ಕಚೇರಿಯಿಂದ ಸರ್ವೇ ಕಾರ್ಯವೂ ನಡೆದಿದೆ. ಕಾಫಿ ಬೋರ್ಡಿನವರು ಕೂಡ ತೋಟವನ್ನು ಪರಿಶೀಲನೆ ನಡೆಸಿದ್ದು, ಈ ಹಿಂದೆ ಕರ್ತವ್ಯದಲ್ಲಿದ್ದ ತಹಸೀಲ್ದಾರರು ಸ್ಥಳ ಪರಿಶೀಲಿಸಿದ್ದಾರೆ. ಜಾಗದ ಬಾಬ್ತು ಅನ್ನು ಕಟ್ಟಲಾಗಿದೆ. ಆದರೂ ಅವರ ಹೆಸರಿಗೆ ಜಾಗ ಮಂಜೂರು ಮಾಡದೇ ಇರುವುದು ತಾಲೂಕು ಆಡಳಿತಕ್ಕೆ ಮಾಜಿ ಸೈನಿಕರ ಮೇಲಿರುವ ಗೌರವವನ್ನು ಪ್ರಶ್ನಿಸುವಂತಾಗಿದೆ ಎಂದು ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ಬೇಸರ ವ್ಯಕ್ತಪಡಿಸಿದರು.

    ತಹಸೀಲ್ದಾರ್ ಕಚೇರಿಯಲ್ಲಿರುವ ಸಾಕಷ್ಟು ಸಿಬ್ಬಂದಿ ಹಣದ ಆಮಿಷ ಒಡ್ಡುತ್ತಿದ್ದಾರೆ. ಇದರಿಂದ ಬಡವರ, ನೊಂದವರ ಕಡತಗಳು ಸಕಾಲದಲ್ಲಿ ವಿಲೇವಾರಿಯಾಗುತ್ತಿಲ್ಲ. ತಹಸೀಲ್ದಾರ್ ಪ್ರಾಮಾಣಿಕರಾಗಿದ್ದರೂ ಕಚೇರಿ ಸಿಬ್ಬಂದಿ ಈ ಬಗ್ಗೆ ಕೈ ಶುದ್ಧ ಇಲ್ಲದೇ ಇರುವುದು ತಾಲೂಕು ಆಡಳಿತಕ್ಕೆ ಲಂಚತನದ ಕಪು ಚುಕ್ಕೆ ಅಂಟಿದೆ. ಇದನ್ನು ತೊಡೆದು ಹಾಕುವ ಪ್ರಯತ್ನಕ್ಕೆ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ ತಹಸೀಲ್ದಾರ್ ಅವರ ಗಮನಕ್ಕೆ ತಂದರು.

    ಸಮಿತಿ ಮನವಿ ಸ್ವೀಕರಿಸಿದ ತಹಸೀಲ್ದಾರ್ ಪ್ರಶಾಂತ್ ಅವರು ಒಂದು ವಾರದೊಳಗೆ ಅರ್ಜಿಯ ಸಾಧಕ ಬಾದಕಗಳ ಬಗ್ಗೆ ಅಂತಿಮ ನಿರ್ಧಾರವನ್ನು ತಿಳಿಸಲಾಗುವುದು ಎಂದು ಭರವಸೆ ನೀಡಿದರು.

    ಪೊನ್ನಂಪೇಟೆ ತಾಲೂಕು ಆಡಳಿತ ಕಚೇರಿಯಲ್ಲಿ ಯಾವುದೇ ಕೆಲಸ ಕಾರ್ಯಗಳಿಗೆ ಹಣ ಪಡೆಯುವುದನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಲಾಗಿದೆ. ಈ ಬಗ್ಗೆ ಕಚೇರಿಯ ಪ್ರತಿ ಸಿಬ್ಬಂದಿಗೂ ಖಡಕ್ ಸೂಚನೆ ನೀಡಲಾಗಿದೆ. ಹಣ ಪಡೆದು ಕೆಲಸ ಕಾರ್ಯಗಳನ್ನು ಮಾಡುತ್ತೇವೆ ಎಂದು ಆಮಿಷ ಒಡ್ಡುವವರನ್ನು ಮತ್ತು ಹಣ ಪಡೆಯುವವರ ಬಗ್ಗೆ ತಿಳಿಸಿದರೆ ಅವರ ಮೇಲೆ ಶಿಸ್ತು ಕ್ರಮಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ತಹಸೀಲ್ದಾರ್ ಪ್ರಶಾಂತ್ ಸಮಜಾಯಿಷಿ ನೀಡಿದರು.
    ಜನಪರವಾಗಿ ಸ್ಪಂದಿಸಲು ತಾಲೂಕು ಆಡಳಿತ ಕರ್ತವ್ಯ ನಿರ್ವಹಿಸುತ್ತಿದೆ. ಈ ಬಗ್ಗೆ ಯಾವುದೇ ಸಂಶಯ ಬೇಡ. ತಪ್ಪುಗಳು ಕಂಡುಬಂದರೆ ತಹಸೀಲ್ದಾರ್, ಎಸಿ ಮತ್ತು ಡಿಸಿಗೆ ದೂರು ಸಲ್ಲಿಸಬಹುದು. ಸಿಬ್ಬಂದಿ ಸಾರ್ವಜನಿಕ ವರ್ತನೆಯಲ್ಲಿ ಅಸಭ್ಯತೆ ಕಂಡುಬಂದರೆ ಅವರ ಮೇಲೂ ಕ್ರಮ ಕೈಗೊಳ್ಳಲು ಮೇಲಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ದಂಡಾಧಿಕಾರಿ ಪ್ರಶಾಂತ್ ಅವರು ಹಿತರಕ್ಷಣಾ ಸಮಿತಿ ಪದಾಧಿಕಾರಿಗಳಿಗೆ ಭರವಸೆ ನೀಡಿದರು.
    ತಾಲೂಕು ಆಡಳಿತ ಕಚೇರಿ ಸುತ್ತ ಬೆಳೆದುನಿಂತಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿ ಶುಚಿತ್ವದ ಕಡೆಗೂ ಗಮನ ಹರಿಸಬೇಕು ಎಂದು ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಸಲಹೆ ನೀಡಿದರು.

    ಕಾರ್ಯಧಕ್ಷ ಬಿ.ಎಸ್. ಕಾರ್ಯಪ್ಪ, ಕಾರ್ಯದರ್ಶಿ ಕೋಳೆರಸನ್ನು ಕಾವೇರಪ್ಪ, ಸಹ ಕಾರ್ಯದರ್ಶಿ ಕೆ.ಕೆ.ಬೆಳ್ಯಪ್ಪ, ಸದಸ್ಯ ಕಾಳಿಮಾಡ ಮುತ್ತಣ್ಣ, ಸಲಹೆಗಾರ ಚೊಟ್ಟೆಯಾಂಡಮಾಡ ವಿಶ್ವನಾಥ್ ಮತ್ತು ಶಿರಸ್ತೇದಾರರಾದ ಟ್ರಿಷ, ರವಿಕುಮಾರ್, ಕೇಸ್ ವರ್ಕರ್ ಮೋಹನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts