ದೇವದುರ್ಗ: ರಾಜ್ಯಾದ್ಯಂತ ಮದ್ಯ ಮಾರಾಟ ಹಾಗೂ ಪೂರೈಕೆ ನಿಷೇಧ ಮಾಡುವಂತೆ ಒತ್ತಾಯಿಸಿ ತಾಲೂಕಿನ ಬಿ.ಗಣೇಕಲ್ ಗ್ರಾಮದಲ್ಲಿ ಮದ್ಯ ನಿಷೇಧ ಆಂದೋಲನ ಕರ್ನಾಟಕ ಹಾಗೂ ಗ್ರಾಕೂಸ್ ಸಂಘಟನೆ ಸದಸ್ಯರು ಮಂಗಳವಾರ ಪತ್ರ ಚಳವಳಿ ನಡೆಸಿದರು.
ಕುಡಿತದಿಂದ ಹಲವು ಕುಟುಂಬಗಳು ಬೀದಿಗೆ ಬಂದಿವೆ. ಲಾಕ್ಡೌನ್ ಸಂದರ್ಭದಲ್ಲಿ 40 ದಿನ ಮದ್ಯ ಮಾರಾಟ ನಿಷೇಧ ಮಾಡಿದ್ದರಿಂದ ಹಲವು ವ್ಯಸನಿಗಳು ಕುಡಿತದಿಂದ ವಿಮುಕ್ತರಾಗಿ ಮದ್ಯ ಇಲ್ಲದೆ ಜೀವನ ನಡೆಸುವುದನ್ನು ಕಲಿತಿದ್ದರು. ಇದರಿಂದ ಲಕ್ಷಾಂತರ ಕುಟುಂಬಗಳು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದವು.
ಸರ್ಕಾರ ಆದಾಯದ ನೆಪ ಹೇಳಿ ಪುನಃ ಮದ್ಯದ ಅಂಗಡಿ ಓಪನ್ ಮಾಡಿದೆ. ಇದಕ್ಕೆ ಬಹುತೇಕ ಜನರು ವಿರೋಧ ವ್ಯಕ್ತಪಡಿಸಿದ್ದರೂ ಸರ್ಕಾರ ಮಹತ್ವ ನೀಡಿಲ್ಲ. ಮದ್ಯದಂಗಡಿ ಆರಂಭಿಸಿದ ಕಾರಣ ಕುಡುಕರು ಮತ್ತೆ ಮದ್ಯದ ದಾಸರಾಗುತ್ತಿದ್ದಾರೆ. ಲಾಕ್ಡೌನ್ನಿಂದ ಮೊದಲೇ ಕೆಲಸವಿಲ್ಲದೆ ಜೀವನ ನಡೆಸುವುದು ದುಸ್ತರವಾಗಿದ್ದು, ಈಗ ವ್ಯಸನಿಗಳು ಮನೆಯ ವಸ್ತುಗಳನ್ನು ಮಾರಾಟ ಮಾಡಿ ಮದ್ಯ ಸೇವಿಸುತ್ತಿದ್ದಾರೆ ಎಂದು ಆರೋಪಿಸಿದರು. ಮದ್ಯ ಮಾರಾಟ ಹಾಗೂ ಪೂರೈಕೆ ನಿಷೇಧಿಸುವಂತೆ ಆಗ್ರಹಿಸಿ 8 ಮಹಿಳೆಯರು ತಲಾ 20 ರೂ. ಸರ್ಕಾರಕ್ಕೆ ಮನಿ ಹಾರ್ಡರ್ ಮಾಡಿದರು. ಸಂಘಟನೆಯ ಮಲ್ಲಮ್ಮ, ತಾಯಮ್ಮ, ಶ್ರೀದೇವಿ, ಬಸ್ಸಮ್ಮ, ದೇವಿಂದ್ರಮ್ಮ, ನಾಗಮ್ಮ, ರೇಣಮ್ಮ, ಶಿವಮ್ಮ ಇತರರಿದ್ದರು.