ಅಳವಂಡಿ: ಆಡಂಬರದ ಮದುವೆಗಳು ಜನರನ್ನು ಆರ್ಥಿಕ ಸಂಕಷ್ಟಕ್ಕೆ ದೂಡುತ್ತಿವೆ. ಆದ್ದರಿಂದ ಸರಳ ಹಾಗೂ ಸಾಮೂಹಿಕ ವಿವಾಹಗಳಿಗೆ ಒತ್ತು ನೀಡಬೇಕು ಎಂದು ಶಿರಹಟ್ಟಿಯ ಫಕೀರೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.
ಬಿಸರಳ್ಳಿ ಗ್ರಾಮದಲ್ಲಿ ಶ್ರೀ ಮರುಳಸಿದ್ಧೇಶ್ವರ ಜಾತ್ರೆ ನಿಮಿತ್ತ ಬುಧವಾರ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಹಾಗೂ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ನವದಂಪತಿಗಳು ಅನ್ಯೋನ್ಯದಿಂದ ಜೀವನ ನಡೆಸಬೇಕು. ದುಡಿದು ಜೀವನ ನಡೆಸುವ ವ್ಯಕ್ತಿ ಯಶಸ್ವಿಯಾಗುತ್ತಾನೆ. ವರದಕ್ಷಿಣೆ ಪಡೆದ ವ್ಯಕ್ತಿ ಸುಖದ ಜೀವನ ನಡೆಸಲು ಸಾಧ್ಯವಾಗುವುದಿಲ್ಲ ಎಂದರು.
ಹೂವಿನಹಡಗಲಿ ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಮಾತನಾಡಿ, ಮನುಷ್ಯನ ಮನ ಶುದ್ಧವಾಗಿರಬೇಕು. ಬದುಕು ಸುಂದರವಾಗಿರಲು ಮನಸ್ಸು ತಿಳಿಯಾಗಿರಬೇಕು. ಅಂದಾಗ ಮಾತ್ರ ಸಾರ್ಥಕ ಜೀವನ ನಡೆಸಲು ಸಾಧ್ಯ. ಪರಿಶುದ್ಧ ಭಾವನೆ ಅಂಧತ್ವ ಹೋಗಲಾಡಿಸುತ್ತದೆ ಎಂದು ಆಶೀರ್ವಚನ ನೀಡಿದರು. ಅಳವಂಡಿ ಮರುಳಾರಾಧ್ಯ ಶಿವಾಚಾರ್ಯರು ಮಾತನಾಡಿದರು. 20 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕೊಪ್ಪಳ ಗವಿಮಠದ ಗವಿಸಿದ್ಧೇಶ್ವರ ಸ್ವಾಮೀಜಿ, ಹಂಪಸಾಗರದ ಶಿವಲಿಂಗ ರುದ್ರಮುನಿ ಶಿವಾಚಾರ್ಯರು, ಮೈನಳ್ಳಿ-ಬಿಕನಳ್ಳಿಯ ಸಿದ್ಧೇಶ್ವರ ಶಿವಾಚಾರ್ಯರು, ಶಾಸಕ ರಾಘವೇಂದ್ರ ಹಿಟ್ನಾಳ್, ಪ್ರಮುಖರಾದ ಗವಿಸಿದ್ದಪ್ಪ ಕರಡಿ, ವೀರೇಶ ಮಹಾಂತಯ್ಯನಮಠ, ಸಾದಿಕ್ ಅತ್ತಾರ, ಮರಿಶಾಂತವೀರ ಚಕ್ಕಡಿಮಠ, ಗಣೇಶ ಹೊರತಟ್ನಾಳ, ಲಲಿತವ್ವ ಸಿಂದೋಗಿ, ಪ್ರವೀಣ ಕುಮಾರ, ಶಿವು ಮೋರನಾಳ, ಅಜಯಗೌಡ, ರಮೇಶರಡ್ಡಿ, ವಿರೂಪಾಕ್ಷಗೌಡ, ನಾಗಪ್ಪ, ಭರಮಜ್ಜ, ನಿಂಗಪ್ಪ ಇತರರಿದ್ದರು.