ಅಳವಂಡಿ: ಮಹಿಳೆಯರ ಆರ್ಥಿಕ ಸಬಲತೆಗೆ ಸರ್ಕಾರ ಹಾಗೂ ಸಂಜೀವಿನಿ ಮಹಿಳಾ ಸಂಘಗಳು ಸಹಕಾರಿಯಾಗಿವೆ ಎಂದು ಸಿದ್ದೇಶ್ವರ ಮಠದ ಮರುಳಾರಾಧ್ಯ ಶಿವಾಚಾರ್ಯರು ಹೇಳಿದರು.
ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಲಿ
ಗ್ರಾಮದಲ್ಲಿ ತಾಪಂ ಕೊಪ್ಪಳ, ತಾಲೂಕಾ ಅಭಿಯಾನ ನಿರ್ವಹಣಾ ಘಟಕ ಕೊಪ್ಪಳ, ಸಂಜೀವಿನಿ ಕರ್ನಾಟಕ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, ಬಾಂಧವ್ಯ ಸಂಜೀವಿನಿ ಗ್ರಾಪಂ ಮಟ್ಟದ ಮಹಿಳಾ ಒಕ್ಕೂಟ ಜಂಟಿಯಾಗಿ ಹಮ್ಮಿಕೊಂಡಿದ್ದ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಗುರುವಾರ ಮಾತನಾಡಿದರು. ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗಬಾರದು. ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಲಿ. ತರಬೇತಿಯಲ್ಲಿ ಮಹಿಳಾ ಸಂಘಟನೆಗಳು ಸಕ್ರಿಯವಾಗಿ ಪಾಲ್ಗೊಂಡು ಕೌಶಲವಂತರಾಗಿ ಅಭಿವೃದ್ದಿ ಹೊಂದಬೇಕು ಎಂದರು.
ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪ್ರತಾಪಗೌಡ ನಂದನಗೌಡ ಮಾತನಾಡಿ, ಕೃಷಿ ಇಲಾಖೆ ಮಹಿಳೆಯರಿಗಾಗಿ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಸಹಾಯಧನದಲ್ಲಿ ಯಂತ್ರಗಳನ್ನು ಪೂರೈಸುತ್ತಿದೆ. ಖಾರಾ ಕುಟ್ಟುವ ಮಿಷನ್, ಹಿಟ್ಟಿನ ಗಿರಣಿ ಮುಂತಾದವುಗಳಿಗೆ ಶೇ.50 ರಿಯಾಯಿತಿಯಲ್ಲಿ ಸಿಗುತ್ತವೆ. ಸ್ತ್ರೀಯರು ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದರು. ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ ಮಾತನಾಡಿದರು.
ಗ್ರಾಪಂ ಉಪಾಧ್ಯಕ್ಷೆ ಶಾರವ್ವ ಇಳಿಗೇರ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಜಗದೀಶ್ವರಿ ಜಣಗಾರ, ಉಪಾಧ್ಯಕ್ಷೆ ಪಕೀರಮ್ಮ ನದಾಪ್, ಕಾರ್ಯದರ್ಶಿ ಜಯಶ್ರೀ ಹಂಚಿನಾಳ, ಉಪಕಾರ್ಯದರ್ಶಿ ಬಸಮ್ಮ ತವದಿ, ಖಜಾಂಚಿ ರೇಣುಕಾ ಹಳ್ಳಿಗುಡಿ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಇತರರಿದ್ದರು.