ಅಳವಂಡಿ: ಹೋಬಳಿಯಾದ್ಯಂತ ನರಕ ಚತುರ್ದಶಿ ಹಾಗೂ ದೀಪಾವಳಿ ಅಮಾವಾಸ್ಯೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕೆಲ ದಿನ ಹಿಂದೆ ಹಿಂಗಾರು ಮಳೆ ಸುರಿದಿದ್ದರಿಂದ ಸಂತಸಗೊಂಡ ರೈತರು, ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು. ವಾರಕ್ಕೂ ಮೊದಲೇ ಮನೆ ಹಾಗೂ ಅಂಗಡಿಗಳಲ್ಲಿ ಸ್ವಚ್ಛತಾ ಕಾರ್ಯ ಕೈಕೊಳ್ಳಲಾಗಿತ್ತು. ಭಾನುವಾರ ಬೆಳಗ್ಗೆ ಮನೆಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಲಾಯಿತು.
ರಾತ್ರಿ ಅಂಗಡಿಗಳಲ್ಲಿ ವಿವಿಧ ಅಲಂಕಾರಿಕ ವಸ್ತು, ತಳಿರು, ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಿದ ಮಂಟಪದಲ್ಲಿ ಲಕ್ಷ್ಮೀಯನ್ನು ಸ್ಥಾಪಿಸಿ ಪೂಜೆ ಸಲ್ಲಿಸಲಾಯಿತು. ಮಹಿಳೆಯರು ದೀಪ ಬೆಳಗಿದರು. ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಇನ್ನು ವಾಹನಗಳ ಮಾಲೀಕರು ವಾಹನಗಳನ್ನು ಶುಚಿಗೊಳಿಸಿ ವಿಶೇಷವಾಗಿ ಅಲಂಕರಿಸಿ ಪೂಜೆ ಸಲ್ಲಿಸಿದರು. ನಂತರ ಬಂಧುಬಳಗದೊಂದಿಗೆ ಸಿಹಿಯೂಟ ಸವಿದರು.